ಬೆಂಗಳೂರು: ಬಾಲಿವುಡ್ ನಟ ಸಂಜಯ್ ದತ್ ಪೋಸ್ಟರ್ ನೀಡಿದ ಸುಳಿವಿನ ಬೆನ್ನು ಹತ್ತಿದ ಮಡಿವಾಳ ಪೊಲೀಸರು, ನಿವೃತ್ತ ಪೊಲೀಸ್ ಕಾನ್ಸ್ಟೆಬಲ್ ಸಾವಿಗೆ ಕಾರಣನಾದ ಆಟೊ ಚಾಲಕನನ್ನು ಬಂಧಿಸಿದ್ದಾರೆ.
ಆಟೊ ಚಾಲಕ ಶೋಯೆಬ್ (30) ಬಂಧಿತ ವ್ಯಕ್ತಿ. ಮಡಿವಾಳ ಮಾರುಕಟ್ಟೆ ಬಳಿ ಜೂನ್ 17ರಂದು ರಸ್ತೆ ದಾಟುತ್ತಿದ್ದ ಕೆಎಸ್ಆರ್ಪಿ ವಸತಿಗೃಹದ ನಿವಾಸಿ ರಾಜ್ಯ ಮೀಸಲು ಪಡೆಯ ನಿವೃತ್ತ ಕಾನ್ಸ್ಟೆಬಲ್ ರಾಮ್ದಾಸ್ (65) ಎಂಬವರಿಗೆ ಆಟೊ ಡಿಕ್ಕಿ ಹೊಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆಟೊ ಚಾಲಕನಿಗೆ ಶೋಧ ನಡೆಸುತ್ತಿದ್ದರು.
ಘಟನೆ ಸಂಭವಿಸಿದ ಸ್ಥಳದ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಘಟನೆಯ ದೃಶ್ಯ ಸೆರೆಯಾಗಿತ್ತಾದರೂ, ಆಟೊದ ನೋಂದಣಿ ಸಂಖ್ಯೆ ಕಾಣಿಸಿರಲಿಲ್ಲ. ಆದರೆ, ಆಟೊ ಮುಂಭಾಗದಲ್ಲಿ ಸಂಜಯ್ ದತ್ ಪೋಸ್ಟರ್ ಇರುವುದು ಕಂಡುಬಂದಿತ್ತು.
ಈ ಸುಳಿವಿನ ಜಾಡು ಹಿಡಿದು ಮಡಿವಾಳ ಮಾರುಕಟ್ಟೆ ಸುತ್ತ-ಮುತ್ತಲಿನ 20ಕ್ಕೂ ಹೆಚ್ಚು ಆಟೊಗಳನ್ನು ಪೊಲೀಸರು ಪರಿಶೀಲಿಸಿದ್ದರು. ಜೂನ್ 18ರಂದು ಲಾಲ್ಬಾಗ್ ಸಿದ್ದಾಪುರದ ಬಳಿ ಮನೆಯೊಂದರ ಮುಂಭಾಗದಲ್ಲಿ ನಿಂತಿದ್ದ ಆಟೊದಲ್ಲಿ ಸಂಜಯ್ದತ್ ಪೋಸ್ಟರ್ ಇರುವ ಬಗ್ಗೆ ಸಂಚಾರ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಆ ಆಟೊ ಚಾಲಕ ಶೋಯೆಬ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಡಿಕ್ಕಿ ಹೊಡೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.