ಬೆಂಗಳೂರು: ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕ ನವೀನ್ (25) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರ್ (36) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
‘ಕೆಂಗೇರಿಯ ಗಾಂಧಿನಗರ ನಿವಾಸಿ ನವೀನ್ ಹಾಗೂ ಅವರ ಚಿಕ್ಕಪ್ಪ ಕುಮಾರ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕೆಂಗೇರಿ 80 ಅಡಿ ರಸ್ತೆಯಲ್ಲಿ ಗುರುವಾರ ರಾತ್ರಿ ಪುನಃ ಗಲಾಟೆ ಆಗಿತ್ತು. ಇದೇ ವೇಳೆ ನವೀನ್ ಕೊಲೆ ಆಗಿದೆ’ ಎಂದು ಪೊಲೀಸರು ಹೇಳಿದರು.
‘ನವೀನ್ ಅವರು ಕುಮಾರ್ ಅವರಿಗೆ ಹಲವು ಬಾರಿ ಹೊಡೆದಿದ್ದರು. ಕೊಲೆ ಬೆದರಿಕೆ ಸಹ ಹಾಕಿದ್ದರು. ಇದರಿಂದಾಗಿ ಕುಮಾರ್ ಬೇಸತ್ತಿದ್ದರು. ಈ ಬಗ್ಗೆ ಆರೋಪಿ ಹೇಳಿಕೆ ನೀಡಿದ್ದಾರೆ.’
‘ನವೀನ್ಗೆ ಡ್ಯಾಗರ್ ಇರಿಯುವಾಗ ಕುಮಾರ್ ಕಾಲಿಗೂ ಗಾಯವಾಗಿತ್ತು. ನವೀನ್ ಸ್ಥಳದಲ್ಲೇ ಮೃತಪಟ್ಟರು. ಕುಮಾರ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಚೇತರಿಸಿಕೊಂಡಿದ್ದು, ಅವರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.