ಬೆಂಗಳೂರು: ಚಾಲಕರೊಬ್ಬರಿಗೆ ಚಾಕುವಿನಿಂದ ಇರಿದು ಆಟೊ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ತಿಲಕ್ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಆರ್ಬಿಐ ಬಡಾವಣೆಯಲ್ಲಿ ಮಾರ್ಚ್ 4ರಂದು ಮಧ್ಯಾಹ್ನ ನಡೆದಿದ್ದ ಘಟನೆ ಸಂಬಂಧ ಚಾಲಕ ಮೊಹಮ್ಮದ್ ಯಾಸೀನ್ ದೂರು ನೀಡಿದ್ದರು. ತನಿಖೆ ಕೈಗೊಂಡು ಇಬ್ಬರನ್ನು ವಶಕ್ಕೆ ಪಡೆದು, ಆಟೊ ಜಪ್ತಿ ಮಾಡಲಾಗಿದೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಸಿದ್ದಾಪುರದ ಚಾಲಕ ಮೊಹಮ್ಮದ್ ಯಾಸೀನ್, ರಸ್ತೆ ಪಕ್ಕದಲ್ಲಿ ಆಟೊ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಸ್ಥಳಕ್ಕೆ ಬಂದಿದ್ದ ನಾಲ್ವರು ಆರೋಪಿಗಳು, ಚಾಕು ತೋರಿಸಿ ಹಣಕ್ಕಾಗಿ ಒತ್ತಾಯಿಸಿದ್ದರು. ಹಣ ನೀಡದಿದ್ದಕ್ಕೆ ಚಾಕುವಿನಿಂದ ಇರಿದು, ಆಟೊ ಸುಲಿಗೆ ಮಾಡಿದ್ದರು’ ಎಂದರು.