<p><strong>ಬೆಂಗಳೂರು</strong>: ಎಲ್ಪಿಜಿ ದರ ಏರಿಕೆ ಮಾಡಿರುವುದು ಆಟೊ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ದರ ಹೆಚ್ಚಳ ಹೆಸರಿನಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ಹಣ ಸುಲಿಗೆ ಮಾಡಲಾಗುತ್ತಿದೆ.</p>.<p>ಯುದ್ಧದ ಪರಿಣಾಮ ಕಳೆದ ಕೆಲವು ದಿನಗಳಿಂದ ಎಲ್ಪಿಜಿ ಅಭಾವ ಉಂಟಾಗಿತ್ತು. ಗ್ಯಾಸ್ ತುಂಬಿಸಿಕೊಳ್ಳಲು ಚಾಲಕರು ಬಂಕ್ಗಳ ಮುಂದೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಕಂಗಾಲಾಗಿದ್ದರು. ನಿತ್ಯದ ಸಂಪಾದನೆಯ ಸಮಯವನ್ನು ಸರತಿ ಸಾಲಿನಲ್ಲಿ ಕಳೆಯುವಂತಾಗಿತ್ತು.</p>.<p>ಈಗ ಕೇಂದ್ರ ಸರ್ಕಾರ ಎಲ್ಪಿಜಿ ದರವನ್ನು ಪ್ರತಿ ಲೀಟರ್ಗೆ ₹5.73 ಏರಿಕೆ ಮಾಡಿದೆ. ಪ್ರಸ್ತುತ ಎಲ್ಪಿಜಿ ಪ್ರತಿ ಲೀಟರ್ಗೆ ₹95.24 ಇದೆ. ಖಾಸಗಿ ಬಂಕ್ಗಳಲ್ಲಿ ಪ್ರತಿ ಲೀಟರ್ಗೆ ₹120 ರವರೆಗೂ ಇದೆ. ಒಂದೊಂದು ಖಾಸಗಿ ಬಂಕ್ಗಳಲ್ಲಿ ಒಂದೊಂದು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. </p>.<p>ದರ ಹೆಚ್ಚಳದಿಂದ ತತ್ತರಿಸಿ ಹೋಗಿರುವ ಆಟೊ ಚಾಲಕರು, ಅನಧಿಕೃತವಾಗಿ ಪ್ರಯಾಣಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. </p>.<p>ದರ ಹೆಚ್ಚಳ ವಿರೋಧಿಸಿರುವ ಆಟೊ ಚಾಲಕರು, ಪ್ರಯಾಣ ದರ ಹೆಚ್ಚಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಇದರಿಂದಾಗಿ ಆಟೊಗಳಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟಿದೆ.</p>.<p>ಸದ್ಯ ನಗರದಲ್ಲಿ ಆಟೊ ಪ್ರಯಾಣದ ಕನಿಷ್ಠ ದರ (ಮೊದಲ 2 ಕಿಲೋ ಮೀಟರ್ಗೆ) ₹36 ನಿಗದಿಪಡಿಸಲಾಗಿದೆ. ನಂತರದ ಪ್ರತಿ ಕಿಲೋ ಮೀಟರ್ಗೆ ₹18 ಇದೆ. ಆದರೆ, ಈಗ ಎಲ್ಪಿಜಿ ಬೆಲೆ ಏರಿಕೆ ಆಗಿರುವುದರಿಂದ ಈ ದರದಲ್ಲಿ ಆಟೊ ಓಡಿಸಿದರೆ ಯಾವುದೇ ಲಾಭವಿಲ್ಲವೆಂದು ಕನಿಷ್ಠ ದರವನ್ನು ₹50ಕ್ಕೆ ಹಾಗೂ ನಂತರದ ಪ್ರತಿ ಕಿಲೋ ಮೀಟರ್ಗೆ ₹25ಕ್ಕೆ ಏರಿಸಬೇಕು ಎಂದು ವಿವಿಧ ಆಟೋ ಚಾಲಕರ ಸಂಘಟನೆಗಳು ಒತ್ತಾಯಿಸಿವೆ. ಆದರೆ, ದರ ಏರಿಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. </p>.<p>ಆಟೊ ಬಾಡಿಗೆಯಲ್ಲಿ ಮನೆಯ ಖರ್ಚು, ಮಕ್ಕಳ ಶಿಕ್ಷಣ, ಮನೆ ಬಾಡಿಗೆ, ದೈನಂದಿನ ಖರ್ಚು, ವಾಹನದ ನಿರ್ವಹಣೆ, ಇಎಂಐ ಹಾಗೂ ಇತರೆ ಖರ್ಚು, ವೆಚ್ಚ ಭರಿಸುವುದೇ ಸವಾಲಾಗಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು. </p>.<p>‘ಆಟೊ ಓಡಿಸಿಕೊಂಡು ಹಲವು ವರ್ಷಗಳಿಂದ ನಗರದಲ್ಲಿ ಜೀವನ ಸಾಗಿಸುತ್ತಿದ್ದೇನೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರ ನಡುವೆ ಎಲ್ಪಿಜಿ ಅಭಾವ, ದರ ಏರಿಕೆ. ಅಲ್ಪ ಸ್ವಲ್ಪ ಹಣದಲ್ಲೇ ಕುಟುಂಬ ನಿರ್ವಹಣೆ ಮಾಡಬೇಕಾಗಿದೆ. ಕೂಡಲೇ ಎಲ್ಪಿಜಿ ದರ ಇಳಿಸಬೇಕು’ ಎಂದು ಚಾಲಕ ರವೀಶ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. </p>.<p>‘ನಗರದಲ್ಲಿ 2.60 ಲಕ್ಷ ಆಟೊಗಳಿವೆ. ಈ ಪೈಕಿ 90 ಸಾವಿರ ಎಲ್ಪಿಜಿ ಬಳಸುವ ಆಟೊಗಳಾಗಿವೆ. ದಿನಕ್ಕೆ 12 ಗಂಟೆ ಆಟೊ ಓಡಿಸಿದರೆ ಲಾಭ. ಇತ್ತೀಚಿನ ದಿನಗಳಲ್ಲಿ ಆಟೊ ವ್ಯಾಪಾರವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ಎಲ್ಪಿಜಿಯಿಂದ ಸಿಎನ್ಜಿಗೆ ಪರಿವರ್ತಿಸಿಕೊಳ್ಳಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ದಟ್ಟಣೆ ಅವಧಿಯಾದ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಕೆಲವು ಚಾಲಕರು ಹೆಚ್ಚು ಹಣ ಕೇಳುತ್ತಿದ್ದಾರೆ’ ಎಂದು ಆಟೊ ಚಾಲಕ ಬಾಬು ಹೇಳಿದರು.</p>.<p>‘ಕೆಲವರಿಗೆ ತಮ್ಮ ವಾಹನಗಳ ಸಾಲದ ಕಂತು ಕಟ್ಟಲು ಆಗುತ್ತಿಲ್ಲ. ಹೀಗಾಗಿ ಸಾಲ ನೀಡಿರುವ ಸಂಸ್ಥೆಗಳು ಆಟೊಗಳನ್ನು ಜಪ್ತಿ ಮಾಡುತ್ತಿವೆ. ಓಲಾ, ಊಬರ್, ರ್ಯಾಪಿಡೊ ಸಂಸ್ಥೆಗಳು ಪ್ರಯಾಣ ದರ ಹೆಚ್ಚಿಸಿದರೆ ಪ್ರಯಾಣಿಕರ ಸಂಖ್ಯೆ ಕ್ಷೀಣಿಸುವ ಭಯವಿದೆ. ಚಾಲಕರು ಕುಟುಂಬ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಇಂಥಹ ಪರಿಸ್ಥಿತಿಯಲ್ಲಿ ಎಲ್ಪಿಜಿ ದರ ಏರಿಕೆ ಮಾಡಲಾಗಿದೆ. ರಾಜ್ಯ ಸರ್ಕಾರ ತಕ್ಷಣ ಮಧ್ಯೆ ಪ್ರವೇಶಿಸಿ ದರ ಇಳಿಕೆ ಮಾಡಬೇಕು. ಇಲ್ಲವಾದರೆ ಪ್ರಯಾಣಿಕರಿಂದ ಅಧಿಕ ದರ ಪಡೆಯುವುದು ಅನಿವಾರ್ಯವಾಗಲಿದೆ’ ಎಂದು ಚಾಲಕರು ಹೇಳಿದರು.</p>.<p>ಮೀಟರ್ ದರ ಪರಿಷ್ಕರಿಸಿ: ‘ಅಗತ್ಯ ವಸ್ತುಗಳ ಬೆಲೆ ಏರಿಕೆ ಜತೆಗೆ ಎಲ್ಪಿಜಿ ದರ ಹೆಚ್ಚಿಸಲಾಗಿದೆ. ಇದರಿಂದ ಜೀವನ ನಡೆಸುವುದು ಕಷ್ಟ. ಬೆಲೆ ಏರಿಕೆಗೆ ತಕ್ಕಂತೆ ಮೀಟರ್ ದರವನ್ನು ಪರಿಷ್ಕರಿಸಬೇಕು. ಕನಿಷ್ಠ ದರ ₹ 36 ಇದ್ದರೂ ₹50 ನೀಡುವಂತೆ ಪ್ರಯಾಣಿಕರಿಗೆ ಮೊದಲೇ ಹೇಳುತ್ತೇವೆ. ಅಗತ್ಯವಿದ್ದವರು ಬರುತ್ತಾರೆ. ಈಗಾಗಲೇ ಆಟೊ ಚಾಲಕರ ಸಂಘದವರು ಕನಿಷ್ಠ ದರವನ್ನು ₹ 50ಕ್ಕೆ ಏರಿಸುವಂತೆ ಮನವಿ ಮಾಡಿದ್ದಾರೆ. ಇನ್ನೂ ತೀರ್ಮಾನವಾಗಿಲ್ಲ’ ಎಂದು ಆಟೊ ಚಾಲಕ ರಾಜೇಶ್ ಹೇಳಿದರು.</p>.<p><strong>ಅಧಿಕ ಹಣ ವಸೂಲಿ ಮಾಡುತ್ತಿಲ್ಲ..</strong></p><p>‘ಎಲ್ಪಿಜಿ ದರ ಹೆಚ್ಚಳದಿಂದ ಆಟೊ ಚಾಲಕರು ಸಂಕಷ್ಟದಲ್ಲಿದ್ದಾರೆ. ಬಹುತೇಕರು ಓಲಾ ಉಬರ್ ನಮ್ಮ ಯಾತ್ರಿಯಲ್ಲಿ ಬುಕ್ ಮಾಡಿಕೊಂಡು ಪ್ರಯಾಣಿಸುತ್ತಾರೆ. ಮೆಜೆಸ್ಟಿಕ್ ರೈಲು ನಿಲ್ದಾಣದ ಕಡೆ ಮೀಟರ್ ಮೇಲೆ ಹೆಚ್ಚುವರಿ ಹಣ ಕೇಳಬಹುದು. ಆದರೆ ಯಾವ ಪ್ರಯಾಣಿಕರಿಗೂ ಬಲವಂತ ಮಾಡುವುದಿಲ್ಲ’ ಎಂದು ಬೆಂಗಳೂರು ಸಾರಥಿ ಸೇನೆ ಅಧ್ಯಕ್ಷ ರಾಮೇಗೌಡ ಹೇಳಿದರು. ‘ಸಿಲ್ಕ್ ಬೋರ್ಡ್ನಿಂದ ಬೆಳ್ಳಂದೂರಿಗೆ 4 ಕಿ.ಮೀ ಪ್ರಯಾಣಿಸಲು ಒಂದು ತಾಸು ಬೇಕು. ₹40–70 ಬಾಡಿಗೆ ತೆಗೆದುಕೊಳ್ಳುತ್ತೇವೆ. ಸಂಚಾರ ದಟ್ಟಣೆಯ ಕಾರಣಕ್ಕೆ ₹100 ರೂಪಾಯಿ ಚಾಲಕರಿಗೆ ನಷ್ಟವಾಗುತ್ತದೆ. ಈ ನಷ್ಟವನ್ನು ಯಾರು ಭರಿಸಿಕೊಡುತ್ತಾರೆ’ ಎಂದು ಪ್ರಶ್ನಿಸಿದರು.</p>.<p><strong>ಆಟೊ ವ್ಯಾಪಾರಕ್ಕೆ ಹೊಡೆತ</strong></p><p>‘ಬೈಕ್ ಟ್ಯಾಕ್ಸಿ ಬಂದ ಮೇಲೆ ಆಟೊ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಇದರ ಜತೆಗೆ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಎಲ್ಪಿಜಿ ದರ ಏರಿಕೆ ಆಗಿದೆ. ಆಟೊ ಚಾಲಕರು ಪ್ರಯಾಣಿಕರಿಂದ ಅಧಿಕ ಹಣ ಕೇಳಿದರೆ ಬೈಕ್ ಟ್ಯಾಕ್ಸಿಯಲ್ಲಿ ಹೋಗುತ್ತಾರೆ. ಯಾರೋ ಒಂದಿಬ್ಬರು ಕೇಳಿದರೆ ಎಲ್ಲಾ ಚಾಲಕರು ಹೆಚ್ಚು ಹಣ ತೆಗೆದುಕೊಳ್ಳುತ್ತಾರೆ ಎಂಬುದು ಸರಿಯಲ್ಲ’ ಎಂದು ಚಾಮರಾಜಪೇಟೆಯ ಆಟೊ ಚಾಲಕರಾದ ಪ್ರಭಾವತಿ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಎಲ್ಪಿಜಿ ದರ ಏರಿಕೆ ಮಾಡಿರುವುದು ಆಟೊ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ದರ ಹೆಚ್ಚಳ ಹೆಸರಿನಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ಹಣ ಸುಲಿಗೆ ಮಾಡಲಾಗುತ್ತಿದೆ.</p>.<p>ಯುದ್ಧದ ಪರಿಣಾಮ ಕಳೆದ ಕೆಲವು ದಿನಗಳಿಂದ ಎಲ್ಪಿಜಿ ಅಭಾವ ಉಂಟಾಗಿತ್ತು. ಗ್ಯಾಸ್ ತುಂಬಿಸಿಕೊಳ್ಳಲು ಚಾಲಕರು ಬಂಕ್ಗಳ ಮುಂದೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಕಂಗಾಲಾಗಿದ್ದರು. ನಿತ್ಯದ ಸಂಪಾದನೆಯ ಸಮಯವನ್ನು ಸರತಿ ಸಾಲಿನಲ್ಲಿ ಕಳೆಯುವಂತಾಗಿತ್ತು.</p>.<p>ಈಗ ಕೇಂದ್ರ ಸರ್ಕಾರ ಎಲ್ಪಿಜಿ ದರವನ್ನು ಪ್ರತಿ ಲೀಟರ್ಗೆ ₹5.73 ಏರಿಕೆ ಮಾಡಿದೆ. ಪ್ರಸ್ತುತ ಎಲ್ಪಿಜಿ ಪ್ರತಿ ಲೀಟರ್ಗೆ ₹95.24 ಇದೆ. ಖಾಸಗಿ ಬಂಕ್ಗಳಲ್ಲಿ ಪ್ರತಿ ಲೀಟರ್ಗೆ ₹120 ರವರೆಗೂ ಇದೆ. ಒಂದೊಂದು ಖಾಸಗಿ ಬಂಕ್ಗಳಲ್ಲಿ ಒಂದೊಂದು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. </p>.<p>ದರ ಹೆಚ್ಚಳದಿಂದ ತತ್ತರಿಸಿ ಹೋಗಿರುವ ಆಟೊ ಚಾಲಕರು, ಅನಧಿಕೃತವಾಗಿ ಪ್ರಯಾಣಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. </p>.<p>ದರ ಹೆಚ್ಚಳ ವಿರೋಧಿಸಿರುವ ಆಟೊ ಚಾಲಕರು, ಪ್ರಯಾಣ ದರ ಹೆಚ್ಚಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಇದರಿಂದಾಗಿ ಆಟೊಗಳಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟಿದೆ.</p>.<p>ಸದ್ಯ ನಗರದಲ್ಲಿ ಆಟೊ ಪ್ರಯಾಣದ ಕನಿಷ್ಠ ದರ (ಮೊದಲ 2 ಕಿಲೋ ಮೀಟರ್ಗೆ) ₹36 ನಿಗದಿಪಡಿಸಲಾಗಿದೆ. ನಂತರದ ಪ್ರತಿ ಕಿಲೋ ಮೀಟರ್ಗೆ ₹18 ಇದೆ. ಆದರೆ, ಈಗ ಎಲ್ಪಿಜಿ ಬೆಲೆ ಏರಿಕೆ ಆಗಿರುವುದರಿಂದ ಈ ದರದಲ್ಲಿ ಆಟೊ ಓಡಿಸಿದರೆ ಯಾವುದೇ ಲಾಭವಿಲ್ಲವೆಂದು ಕನಿಷ್ಠ ದರವನ್ನು ₹50ಕ್ಕೆ ಹಾಗೂ ನಂತರದ ಪ್ರತಿ ಕಿಲೋ ಮೀಟರ್ಗೆ ₹25ಕ್ಕೆ ಏರಿಸಬೇಕು ಎಂದು ವಿವಿಧ ಆಟೋ ಚಾಲಕರ ಸಂಘಟನೆಗಳು ಒತ್ತಾಯಿಸಿವೆ. ಆದರೆ, ದರ ಏರಿಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. </p>.<p>ಆಟೊ ಬಾಡಿಗೆಯಲ್ಲಿ ಮನೆಯ ಖರ್ಚು, ಮಕ್ಕಳ ಶಿಕ್ಷಣ, ಮನೆ ಬಾಡಿಗೆ, ದೈನಂದಿನ ಖರ್ಚು, ವಾಹನದ ನಿರ್ವಹಣೆ, ಇಎಂಐ ಹಾಗೂ ಇತರೆ ಖರ್ಚು, ವೆಚ್ಚ ಭರಿಸುವುದೇ ಸವಾಲಾಗಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು. </p>.<p>‘ಆಟೊ ಓಡಿಸಿಕೊಂಡು ಹಲವು ವರ್ಷಗಳಿಂದ ನಗರದಲ್ಲಿ ಜೀವನ ಸಾಗಿಸುತ್ತಿದ್ದೇನೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರ ನಡುವೆ ಎಲ್ಪಿಜಿ ಅಭಾವ, ದರ ಏರಿಕೆ. ಅಲ್ಪ ಸ್ವಲ್ಪ ಹಣದಲ್ಲೇ ಕುಟುಂಬ ನಿರ್ವಹಣೆ ಮಾಡಬೇಕಾಗಿದೆ. ಕೂಡಲೇ ಎಲ್ಪಿಜಿ ದರ ಇಳಿಸಬೇಕು’ ಎಂದು ಚಾಲಕ ರವೀಶ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. </p>.<p>‘ನಗರದಲ್ಲಿ 2.60 ಲಕ್ಷ ಆಟೊಗಳಿವೆ. ಈ ಪೈಕಿ 90 ಸಾವಿರ ಎಲ್ಪಿಜಿ ಬಳಸುವ ಆಟೊಗಳಾಗಿವೆ. ದಿನಕ್ಕೆ 12 ಗಂಟೆ ಆಟೊ ಓಡಿಸಿದರೆ ಲಾಭ. ಇತ್ತೀಚಿನ ದಿನಗಳಲ್ಲಿ ಆಟೊ ವ್ಯಾಪಾರವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ಎಲ್ಪಿಜಿಯಿಂದ ಸಿಎನ್ಜಿಗೆ ಪರಿವರ್ತಿಸಿಕೊಳ್ಳಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ದಟ್ಟಣೆ ಅವಧಿಯಾದ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಕೆಲವು ಚಾಲಕರು ಹೆಚ್ಚು ಹಣ ಕೇಳುತ್ತಿದ್ದಾರೆ’ ಎಂದು ಆಟೊ ಚಾಲಕ ಬಾಬು ಹೇಳಿದರು.</p>.<p>‘ಕೆಲವರಿಗೆ ತಮ್ಮ ವಾಹನಗಳ ಸಾಲದ ಕಂತು ಕಟ್ಟಲು ಆಗುತ್ತಿಲ್ಲ. ಹೀಗಾಗಿ ಸಾಲ ನೀಡಿರುವ ಸಂಸ್ಥೆಗಳು ಆಟೊಗಳನ್ನು ಜಪ್ತಿ ಮಾಡುತ್ತಿವೆ. ಓಲಾ, ಊಬರ್, ರ್ಯಾಪಿಡೊ ಸಂಸ್ಥೆಗಳು ಪ್ರಯಾಣ ದರ ಹೆಚ್ಚಿಸಿದರೆ ಪ್ರಯಾಣಿಕರ ಸಂಖ್ಯೆ ಕ್ಷೀಣಿಸುವ ಭಯವಿದೆ. ಚಾಲಕರು ಕುಟುಂಬ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಇಂಥಹ ಪರಿಸ್ಥಿತಿಯಲ್ಲಿ ಎಲ್ಪಿಜಿ ದರ ಏರಿಕೆ ಮಾಡಲಾಗಿದೆ. ರಾಜ್ಯ ಸರ್ಕಾರ ತಕ್ಷಣ ಮಧ್ಯೆ ಪ್ರವೇಶಿಸಿ ದರ ಇಳಿಕೆ ಮಾಡಬೇಕು. ಇಲ್ಲವಾದರೆ ಪ್ರಯಾಣಿಕರಿಂದ ಅಧಿಕ ದರ ಪಡೆಯುವುದು ಅನಿವಾರ್ಯವಾಗಲಿದೆ’ ಎಂದು ಚಾಲಕರು ಹೇಳಿದರು.</p>.<p>ಮೀಟರ್ ದರ ಪರಿಷ್ಕರಿಸಿ: ‘ಅಗತ್ಯ ವಸ್ತುಗಳ ಬೆಲೆ ಏರಿಕೆ ಜತೆಗೆ ಎಲ್ಪಿಜಿ ದರ ಹೆಚ್ಚಿಸಲಾಗಿದೆ. ಇದರಿಂದ ಜೀವನ ನಡೆಸುವುದು ಕಷ್ಟ. ಬೆಲೆ ಏರಿಕೆಗೆ ತಕ್ಕಂತೆ ಮೀಟರ್ ದರವನ್ನು ಪರಿಷ್ಕರಿಸಬೇಕು. ಕನಿಷ್ಠ ದರ ₹ 36 ಇದ್ದರೂ ₹50 ನೀಡುವಂತೆ ಪ್ರಯಾಣಿಕರಿಗೆ ಮೊದಲೇ ಹೇಳುತ್ತೇವೆ. ಅಗತ್ಯವಿದ್ದವರು ಬರುತ್ತಾರೆ. ಈಗಾಗಲೇ ಆಟೊ ಚಾಲಕರ ಸಂಘದವರು ಕನಿಷ್ಠ ದರವನ್ನು ₹ 50ಕ್ಕೆ ಏರಿಸುವಂತೆ ಮನವಿ ಮಾಡಿದ್ದಾರೆ. ಇನ್ನೂ ತೀರ್ಮಾನವಾಗಿಲ್ಲ’ ಎಂದು ಆಟೊ ಚಾಲಕ ರಾಜೇಶ್ ಹೇಳಿದರು.</p>.<p><strong>ಅಧಿಕ ಹಣ ವಸೂಲಿ ಮಾಡುತ್ತಿಲ್ಲ..</strong></p><p>‘ಎಲ್ಪಿಜಿ ದರ ಹೆಚ್ಚಳದಿಂದ ಆಟೊ ಚಾಲಕರು ಸಂಕಷ್ಟದಲ್ಲಿದ್ದಾರೆ. ಬಹುತೇಕರು ಓಲಾ ಉಬರ್ ನಮ್ಮ ಯಾತ್ರಿಯಲ್ಲಿ ಬುಕ್ ಮಾಡಿಕೊಂಡು ಪ್ರಯಾಣಿಸುತ್ತಾರೆ. ಮೆಜೆಸ್ಟಿಕ್ ರೈಲು ನಿಲ್ದಾಣದ ಕಡೆ ಮೀಟರ್ ಮೇಲೆ ಹೆಚ್ಚುವರಿ ಹಣ ಕೇಳಬಹುದು. ಆದರೆ ಯಾವ ಪ್ರಯಾಣಿಕರಿಗೂ ಬಲವಂತ ಮಾಡುವುದಿಲ್ಲ’ ಎಂದು ಬೆಂಗಳೂರು ಸಾರಥಿ ಸೇನೆ ಅಧ್ಯಕ್ಷ ರಾಮೇಗೌಡ ಹೇಳಿದರು. ‘ಸಿಲ್ಕ್ ಬೋರ್ಡ್ನಿಂದ ಬೆಳ್ಳಂದೂರಿಗೆ 4 ಕಿ.ಮೀ ಪ್ರಯಾಣಿಸಲು ಒಂದು ತಾಸು ಬೇಕು. ₹40–70 ಬಾಡಿಗೆ ತೆಗೆದುಕೊಳ್ಳುತ್ತೇವೆ. ಸಂಚಾರ ದಟ್ಟಣೆಯ ಕಾರಣಕ್ಕೆ ₹100 ರೂಪಾಯಿ ಚಾಲಕರಿಗೆ ನಷ್ಟವಾಗುತ್ತದೆ. ಈ ನಷ್ಟವನ್ನು ಯಾರು ಭರಿಸಿಕೊಡುತ್ತಾರೆ’ ಎಂದು ಪ್ರಶ್ನಿಸಿದರು.</p>.<p><strong>ಆಟೊ ವ್ಯಾಪಾರಕ್ಕೆ ಹೊಡೆತ</strong></p><p>‘ಬೈಕ್ ಟ್ಯಾಕ್ಸಿ ಬಂದ ಮೇಲೆ ಆಟೊ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಇದರ ಜತೆಗೆ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಎಲ್ಪಿಜಿ ದರ ಏರಿಕೆ ಆಗಿದೆ. ಆಟೊ ಚಾಲಕರು ಪ್ರಯಾಣಿಕರಿಂದ ಅಧಿಕ ಹಣ ಕೇಳಿದರೆ ಬೈಕ್ ಟ್ಯಾಕ್ಸಿಯಲ್ಲಿ ಹೋಗುತ್ತಾರೆ. ಯಾರೋ ಒಂದಿಬ್ಬರು ಕೇಳಿದರೆ ಎಲ್ಲಾ ಚಾಲಕರು ಹೆಚ್ಚು ಹಣ ತೆಗೆದುಕೊಳ್ಳುತ್ತಾರೆ ಎಂಬುದು ಸರಿಯಲ್ಲ’ ಎಂದು ಚಾಮರಾಜಪೇಟೆಯ ಆಟೊ ಚಾಲಕರಾದ ಪ್ರಭಾವತಿ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>