ಬೆಂಗಳೂರು: ಟಿ.ವಿ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಅಪ್ರಾಪ್ತೆಯನ್ನು ಬೆಂಗಳೂರಿಗೆ ಕರೆತಂದು ಎಂಟು ದಿನ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಆರೋಪಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
‘ಹಾಸನದ ರೈಲ್ವೆ ನಿಲ್ದಾಣಕ್ಕೆ ಬಂದು ಬಾಲಕಿಯನ್ನು ಆನಂದ್ ಎಂಬಾತ ನಗರಕ್ಕೆ ಕರೆತಂದು ಲಾಡ್ಜ್ವೊಂದರಲ್ಲಿ ಎಂಟು ದಿನ ಇರಿಸಿದ್ದ. ನಂತರ ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ್ದ’ ಎಂದು ಸಂತ್ರಸ್ತೆ ನೀಡಿದ ಹೇಳಿಕೆ ಪರಿಗಣಿಸಿ ಪೀಠ ಜಾಮೀನು ನಿರಾಕರಿಸಿದೆ.
‘ಪ್ರೀತಿಸಿ ಮೋಸ ಮಾಡಿರುವ ಪ್ರಕರಣ ಇದಲ್ಲ. ಅಮಾಯಕ ಬಾಲಕಿಯನ್ನು ದಾರಿ ತಪ್ಪಿಸಿದ ಪ್ರಕರಣ ಇದಾಗಿದ್ದು, ಆರೋಪಿಗೆ ಜಾಮೀನು ನೀಡಲು ಸಕಾರಣ ಕಾಣಿಸುತ್ತಿಲ್ಲ’ ಎಂದು ಪೀಠ ಹೇಳಿತು.
ಮಗಳು ಕಾಣೆಯಾಗಿದ್ದಾಳೆ ಎಂದು 2020ರ ಮಾ.6ರಂದು ಹಾಸನ ಪೊಲೀಸರಿಗೆ ಬಾಲಕಿಯ ಪೋಷಕರು ದೂರು ನೀಡಿದ್ದರು. ಆನಂದ್ ಮೇಲೆ ಸಂಶಯ ಇರುವುದಾಗಿ ತಿಳಿಸಿದ್ದರು. ಪೊಲೀಸರು 2020ರ ಮಾ.10ರಂದು ಸಂತ್ರಸ್ತೆಯನ್ನು ಪತ್ತೆ ಹಚ್ಚಿದ್ದರು.
‘ಪರಿಚಯ ಮಾಡಿಕೊಂಡು ಆಗಾಗ ಕರೆ ಮಾಡುತ್ತಿದ್ದ ಆನಂದ್, ಕ್ರಮೇಣ ಪ್ರೀತಿಸುವುದಾಗಿ ಹೇಳಿದ್ದ’ ಎಂದು ಬಾಲಕಿ ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಳು. ಅಧೀನ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.