ಬೆಂಗಳೂರು: ಸತ್ಸಂಗ ಭಜನಾ ಮಹಾಮಂಡಳಿ ಸಭಾಗೆ ಸಂಸ್ಕೃತಿ ಇಲಾಖೆಯಿಂದ ಮನ್ನಣೆ ನೀಡಬೇಕು ಮತ್ತು ಭಜನೆಯು ಯಾವ ಜಾತಿ, ಮತ, ಪಂಥಗಳಿಗೆ ಸೇರದ ಭಕ್ತಿಯ ಒಂದು ಮೂಲವೆಂದು ಪರಿಗಣಿಸಬೇಕು ಎಂದು ಇಲ್ಲಿ ಭಾನುವಾರ ನಡೆದ ಅಖಿಲ ಭಾರತ ಭಜನಾ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭಾದ ಸ್ಥಾಪಕ ಅಧ್ಯಕ್ಷ ಬ್ರಹ್ಮತೇಜ ವೆಂಕಟರಾಮಯ್ಯ ನಿರ್ಣಯಗಳನ್ನು ಓದಿದರು. ಸಮಾವೇಶದಲ್ಲಿ ಸೇರಿದ್ದ ಗಣ್ಯರು ಅನುಮೋದಿಸಿದರು.
ಬೆಳಿಗ್ಗೆ ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಶಿವ ಸಹಸ್ರನಾಮವನ್ನು ಭಜನೆಯ ಮೂಲಕ ಹೇಳಲಾಯಿತು. ಪೇಜಾವರಮಠದ ವಿಶ್ವೇಶತೀರ್ಥ ಶ್ರೀಗಳಿಗೆ ಸಮಾವೇಶದಲ್ಲಿ ಸಂತಾಪ ಸೂಚಿಸಲಾಯಿತು.
ಬೇಲಿಮಠದ ಶಿವರುದ್ರ ಸ್ವಾಮೀಜಿ, ‘ಪೇಜಾವರ ಶ್ರೀಗಳು ಎಲ್ಲ ಧರ್ಮದವರಿಗೂ ಆತ್ಮಶಕ್ತಿ ತುಂಬಿದ್ದರು. ಅವರು ಇಡೀ ಜನಾಂಗಕ್ಕೆ ಶ್ರೇಷ್ಠ ಸನ್ಯಾಸಿಯಾಗಿದ್ದರು’ ಎಂದರು.
ಓಂಕಾರಾಶ್ರಮದ ಮಧುಸೂದನಾನಂದಪುರಿ ಸ್ವಾಮೀಜಿ, ‘ಪೇಜಾವರ ಶ್ರೀಗಳ ನಿಧನದಿಂದ ಹಿಂದೂಧರ್ಮಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದರು.