ಶಿವಮೊಗ್ಗ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ), ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಗಳನ್ನು ನಿಷೇಧಿಸುವ ಕುರಿತು ಆ.20ರಂದು ನಡೆಯುವ ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುದಂತೆ ಒತ್ತಡ ಹೆಚ್ಚಾಗುತ್ತಿದೆ. ಕೆ.ಜೆ ಹಳ್ಳಿ ಗಲಭೆ, ಶಂಕರರಾಚಾರ್ಯರ ವಿಗ್ರಹದ ಮೇಲೆ ಎಸ್ಡಿಪಿಐ ಸಂಘಟನೆಯ ಬಾವುಟ ಹಾಕಿರುವುದು ಮೌಲ್ಯಗಳ ಮೇಲೆ ನಡೆದ ಹಲ್ಲೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಖಂಡಿಸಿದರು.
ಗಲಭೆಗೆಯ ತನಿಖೆಗೆ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ರಚಿಸಿದೆ. ಅವರಿಂದಲಾದರೂ ಸತ್ಯ ಹೊರತರಲಿ. ಇದುವರೆಗೂ ಕಾಂಗ್ರೆಸ್ ನಾಯಕರು ಗಲಭೆಯನ್ನು ಖಂಡಿಸಿಲ್ಲ. ಮುಂದೆಯಾದರೂ ರಾಷ್ಟ್ರೀಯ ಮೌಲ್ಯ ಒಳಗೊಂಡ ರಾಜಕಾರಣ ಮಾಡಲಿ. ಗಲಭೆಯಲ್ಲಿ ಮೃತಪಟ್ಟವರು ಅಮಾಯಕರು ಎಂದಿರುವ ಶಾಸಕ ಜಮೀರ್ ಅಹಮದ್ ಒಬ್ಬ ರಾಷ್ಟ್ರದ್ರೋಹಿ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ವಿರುದ್ಧ ಟೀಕೆ ಮಾಡಿರುವ ಸಿದ್ದರಾಮಯ್ಯ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ನವೀನ್ ಬಿಜೆಪಿ ಕಾರ್ಯಕರ್ತನಲ್ಲ. ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ನವೀನ್ ಬಿಜೆಪಿ ಕಾರ್ಯಕರ್ತ ಎಂದೇ ಡಿ.ಕೆ.ಶಿವಕುಮಾರ್ ಬಿಂಬಿಸುತ್ತಿದ್ದಾರೆ. ಇಂತಹ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳದ ಅನುಭವಿ ನಾಯಕ ಸಿದ್ದರಾಮಯ್ಯ ಅವರಿಗೆ ಒಂದನೇ ತರಗತಿಯಿಂದ ಪಾಠ ಮಾಡಬೇಕಿದೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಭಯದ ಕಾರಣ ದೂರು ನೀಡಿಲ್ಲ. ಶಾಸಕರ ಮನೆಗೆ ಹೋಗಿ ಕಾಂಗ್ರೆಸ್ ನಾಯಕರು ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್, ಸತ್ಯನಾರಾಯಣ, ಕೆ.ವಿ.ಅಣ್ಣಪ್ಪ ಇದ್ದರು.