ಬೆಂಗಳೂರು: ನಗರದಲ್ಲಿ ಬುಧವಾರವೂ ಧಾರಾಕಾರ ಮಳೆ ಸುರಿಯಿತು. ಗುಡುಗು ಸಮೇತ ಅಬ್ಬರದ ಮಳೆಯಿಂದ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು.
ಕೆಲದಿನಗಳಿಂದ ನಗರದಲ್ಲಿ ಸತತ ಮಳೆಯಾಗುತ್ತಿದೆ. ಬುಧವಾರ ಹಗಲು ಹೊತ್ತಿನಲ್ಲಿ ಮಳೆ ಬಿಡುವು ನೀಡಿ ದ್ದರೂ ಮೋಡ ಕವಿದ ವಾತಾವರಣವಿತ್ತು.
ರಾತ್ರಿ ಒಂಬತ್ತರ ನಂತರ ಭಾರಿ ಮಳೆ ಯಾಯಿತು.ಹಲವು ಪ್ರದೇಶಗಳಲ್ಲಿ ಕಾಲುವೆಗಳು ತುಂಬಿ, ರಸ್ತೆ ಮೇಲೆಯೇ ಹರಿಯುವ ನೀರಿನಲ್ಲೇ ವಾಹನಗಳು ಸಂಚರಿಸಿದವು.
ಮಲ್ಲೇಶ್ವರ, ಆರ್.ಟಿ. ನಗರ, ಬನ ಶಂಕರಿ, ಕೆಂಗೇರಿ, ರಾಜರಾಜೇಶ್ವರಿ ನಗರ, ನಾಯಂಡಹಳ್ಳಿ, ದೀಪಾಂಜಲಿ ನಗರ, ಹನುಮಂತನಗರ, ಬಸವನಗುಡಿ, ವಿಜಯ ನಗರ, ರಾಜಾಜಿನಗರ, ಬಸವೇಶ್ವರನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಗಾಂಧಿನಗರ, ಮೆಜೆಸ್ಟಿಕ್ ಹಾಗೂ ಸುತ್ತ ಮುತ್ತಮಳೆಸುರಿಯಿತು.
ಎಂ.ಜಿ. ರಸ್ತೆ, ಅಶೋಕನಗರ, ಶಿವಾಜಿ ನಗರ, ಹಲಸೂರು, ಇಂದಿರಾನಗರ, ದೊಮ್ಮಲೂರು, ಹೆಣ್ಣೂರು, ಬಾಣಸವಾಡಿ, ಶಾಂತಿನಗರ, ಲಾಲ್ಬಾಗ್, ವಿಲ್ಸನ್ ಗಾರ್ಡನ್, ಕೋರಮಂಗಲ, ಮಡಿವಾಳ, ಎಚ್ಎಸ್ಆರ್ ಲೇಔಟ್ ಹಾಗೂ ಇತರೆಡೆಯೂಮಳೆಸುರಿಯಿತು.
ಶಿವಾನಂದ ವೃತ್ತ, ಆನಂದ ರಾವ್ ವೃತ್ತದಲ್ಲಿನ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು.
ಮೆಜೆಸ್ಟಿಕ್ ರೈಲ್ವೆ ಸೇತುವೆ, ಚಿಕ್ಕಪೇಟೆ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ ಸೇರಿ ಹಲವೆಡೆ ರಸ್ತೆ ಮೇಲೆಯೇ ನೀರು ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು.