ಬೆಂಗಳೂರು: ರಾಜ್ಯದಲ್ಲಿ ಕೋವಿಡ್ನಿಂದ ಮೃತಪಡುವವರ ಸಂಖ್ಯೆ ಹೆಚ್ಚುತ್ತಿದ್ದು, ಶುಕ್ರವಾರ ಮತ್ತೆ ಹತ್ತು ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಮೃತರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಏಳು ಮಂದಿ, ಬೀದರ್ನಲ್ಲಿ ಇಬ್ಬರು ಹಾಗೂ ವಿಜಯಪುರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಒಂದೇ ದಿನ 10,553 ಕೋವಿಡ್ ಪರೀಕ್ಷೆ ನಡೆಸಿದ ಪರಿಣಾಮ ಪ್ರಕರಣಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಹೊಸದಾಗಿ 337 ಮಂದಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದ್ದು, ಕೋವಿಡ್ ಪೀಡಿತರ ಸಂಖ್ಯೆ 8,281ಕ್ಕೆ ತಲುಪಿದೆ. ಶುಕ್ರವಾರ ವರದಿಯಾದ ಪ್ರಕರಣಗಳಲ್ಲಿ 93 ಮಂದಿ ಅನ್ಯ ರಾಜ್ಯಗಳಿಂದ ಬಂದವರಾಗಿದ್ದರೆ, 11 ಮಂದಿ ವಿದೇಶಕ್ಕೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದಾರೆ.
ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾದ ರೋಗಿಗಳ ಸಂಖ್ಯೆ 78ಕ್ಕೆ ಏರಿದೆ. ರಾಯಚೂರಿನಲ್ಲಿ 61 ಮಂದಿ ಸೇರಿದಂತೆ ಒಟ್ಟು 230 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಗುಣಮುಖರಾದವರ ಸಂಖ್ಯೆ ಐದು ಸಾವಿರ (5,210) ದಾಟಿದೆ.
ಬೆಂಗಳೂರಿನಲ್ಲಿ 138, ಕಲಬುರ್ಗಿಯಲ್ಲಿ 52, ಬಳ್ಳಾರಿಯಲ್ಲಿ 37, ಹಾಸನದಲ್ಲಿ 18, ದಕ್ಷಿಣ ಕನ್ನಡದಲ್ಲಿ 13, ದಾವಣಗೆರೆಯಲ್ಲಿ 12, ಉಡುಪಿಯಲ್ಲಿ11, ಬೀದರ್ನಲ್ಲಿ 10, ಮೈಸೂರಿನಲ್ಲಿ 6, ಕೊಪ್ಪಳದಲ್ಲಿ 6, ಯಾದಗಿರಿಯಲ್ಲಿ4, ಕೋಲಾರದಲ್ಲಿ4, ಬೆಂಗಳೂರು ಗ್ರಾಮಾಂತರದಲ್ಲಿ 4, ಮಂಡ್ಯದಲ್ಲಿ 3, ಧಾರವಾಡದಲ್ಲಿ 3, ಚಿಕ್ಕಬಳ್ಳಾಪುರದಲ್ಲಿ 3, ಬಾಗಲಕೋಟೆಯಲ್ಲಿ 3, ರಾಮನಗರದಲ್ಲಿ 3, ತುಮಕೂರಿನಲ್ಲಿ 2, ಚಿಕ್ಕಮಗಳೂರಿನಲ್ಲಿ 2 ಹಾಗೂ ಬೆಳಗಾವಿ, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ 65 ವರ್ಷದ ಮಹಿಳೆ, 78 ವರ್ಷದ ವೃದ್ಧ ಹಾಗೂ 54 ವರ್ಷದಿಂದ 72 ವರ್ಷದವರೆಗಿನ ಐವರು ಪುರುಷರು ಮೃತಪಟ್ಟಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ಸಾವಿಗೀಡಾದವರ ಸಂಖ್ಯೆ 58ಕ್ಕೆ ತಲುಪಿದೆ.
ಬೀದರ್ನಲ್ಲಿ 45 ವರ್ಷದ ಪುರುಷ ಹಾಗೂ 70 ವರ್ಷದ ವೃದ್ಧ, ವಿಜಯಪುರದಲ್ಲಿ 66 ವರ್ಷದ ವೃದ್ಧೆ ನಿಧನರಾಗಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕರು ಅನಾರೋಗ್ಯದಿಂದ ಬಳಲುತ್ತಿದ್ದವರೇ ಆಗಿದ್ದಾರೆ. ಕೆಲವರ ಕೋವಿಡ್ ಪರೀಕ್ಷಾ ವರದಿ ಮೃತಪಟ್ಟ ಬಳಿಕ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.