ಬೆಂಗಳೂರು: ‘ಬರಹಗಾರ ಎಂದರೆ ಅಂತರಂಗದಲ್ಲಿ ಅವನೊಬ್ಬ ಹೋರಾಟಗಾರ. ಆದೇ ರೀತಿ ನಾನು ಸಹ ಬರಹದ ಮೂಲಕ ಜನ ಸಾಮಾನ್ಯರ ಧ್ವನಿಯಾಗಿರುತ್ತೇನೆ’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗೋವಾದ ಕೊಂಕಣಿ ಸಾಹಿತಿ ದಾಮೋದರ್ ಮೌಜೊ ಅಭಿಪ್ರಾಯಪಟ್ಟರು.
‘ಕೊಂಕಣಿ; ಒಂದು ಭಾಷೆ ಹಲವು ಲಿಪಿ’ ಗೋಷ್ಠಿಯಲ್ಲಿ ವರ್ಚುವಲ್ ರೂಪದಲ್ಲಿ ಪಾಲ್ಗೊಂಡ ಅವರು, ‘ಸಾಮಾನ್ಯ ಜನರು ಸಹ ಪ್ರಭುತ್ವದ ತಪ್ಪುಗಳ ವಿರುದ್ಧ ದನಿ ಎತ್ತಬೇಕು’ ಎಂದರು.
‘ಜ್ಞಾನಪೀಠ ಪ್ರಶಸ್ತಿ ದೊರೆತಾಗ ಮುಖ್ಯಮಂತ್ರಿಯೇ ನನ್ನ ಮನೆಗೆ ಬಂದು ಅಭಿನಂದಿಸಿದ್ದರು. ಅಷ್ಟು ಮಾತ್ರಕ್ಕೆ ಸರ್ಕಾರದ ತಪ್ಪುಗಳ ವಿರುದ್ಧ ಮಾತನಾಡದಿರಲು ಆಗುವುದಿಲ್ಲ’ ಎಂದು ಹೇಳಿದರು.
‘ಕೊಂಕಣಿಯನ್ನು ಗೋವಾ ಸರ್ಕಾರ ರಾಜ್ಯದ ಅಧಿಕೃತ ಭಾಷೆ ಎಂದು 1996–97ರಲ್ಲಿ ಘೋಷಿಸಿದೆ. ಗೋವಾ, ಕೇರಳ, ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಪದಗಳ ಅರ್ಥದಲ್ಲಿ ವ್ಯತ್ಯಾಸವಿದೆ. ಭಾಷಿಕರು ಯಾವುದೇ ರಾಜ್ಯದಲ್ಲಿ ಇದ್ದರೂ, ಸಂಸ್ಕೃತಿ ಒಂದೇ ಆಗಿದೆ’ ಎಂದರು.
‘ಬೇರೆ ಬೇರೆ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದೇನೆ. ಆದರೆ, ಕೊಂಕಣಿಯೇ ನನ್ನ ಅಚ್ಚುಮೆಚ್ಚಿನ ಭಾಷೆ. ಮಾತೃ ಭಾಷೆಯಲ್ಲಿ ಮಾತ್ರ ಭಾವನೆಗಳನ್ನು ಪರಿಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯ’ ಎಂದು ಪ್ರತಿಪಾದಿಸಿದರು.