ಬೆಂಗಳೂರು: ಹಳೇ ನಿಷೇಧಿತ ನೋಟುಗಳನ್ನು ಬದಲಾವಣೆ ಮಾಡುವುದಾಗಿ ಹೇಳಿ ವಂಚಿಸುತ್ತಿದ್ದ ಜಾಲವನ್ನು ಯಶವಂತಪುರ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಡಗಿನ ದಿನೇಶ್ (39), ರಾಸಿಕ್ (25), ನಾಗರಾಜ್ (48) ಹಾಗೂ ಕೃಷ್ಣಮೂರ್ತಿ (36) ಬಂಧಿತರು. ಅವರಿಂದ ₹ 96 ಲಕ್ಷ ಮೌಲ್ಯದ ಹಳೇ ನಿಷೇಧಿತ ನೋಟುಗಳನ್ನು ಜಪ್ತಿ ಮಾಡಲಾಗಿದೆ.
‘ಕೇರಳದ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿಗಳು, ತಮಗೆ ಕಮಿಷನ್ ನೀಡಿದರೆ ಹಳೇ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಡುವುದಾಗಿ ಹೇಳಿದ್ದರು. ಉದ್ಯಮಿಯಿಂದಲೇ ನೋಟುಗಳನ್ನು ಪಡೆದುಕೊಂಡು ಬೆಂಗಳೂರಿಗೆ ಬಂದಿದ್ದರು’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೇಳಿದರು.
‘ಯಶವಂತಪುರ ಆರ್ಟಿಒ ಕಚೇರಿ ಬಳಿ ಆರೋಪಿಗಳು ನಿಂತಿದ್ದರು. ಭಾತ್ಮಿದಾರರೊಬ್ಬರು ನೀಡಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ಮೊಹಮ್ಮದ್ ಮುಕಾರಾಮ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ’ ಎಂದೂ ತಿಳಿಸಿದರು.