ಬೊಮ್ಮನಹಳ್ಳಿ:ಬೊಮ್ಮನಹಳ್ಳಿ ವಾರ್ಡ್ನ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ರಾಜಕಾಲುವೆಯ ಮೇಲೆಯೇ ಬಾರ್ ಅಂಡ್ ರೆಸ್ಟೊರೆಂಟ್ ನಿರ್ಮಾಣಕ್ಕೆ ಅವಕಾಶ ನೀಡಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಸತಿ ಪ್ರದೇಶದಲ್ಲಿ ಮದ್ಯಪಾನ ಅಂಗಡಿ ಇರುವುದರಿಂದ ತೊಂದರೆಯಾಗುತ್ತಿದೆ ಎಂದು ಅವರು ದೂರಿದ್ದಾರೆ.
ದೇವರಚಿಕ್ಕನಹಳ್ಳಿಯ ಆರ್ಟಿಒ ಕಚೇರಿ ಬಳಿ ಹಾದು ಹೋಗುವ ರಾಜಕಾಲುವೆಯಲ್ಲೇ ಪಿಲ್ಲರ್ ಹಾಕಿ ಸೇತುವೆ ನಿರ್ಮಾಣ ಮಾಡಿ ಕಟ್ಟಡಕ್ಕೆ ದಾರಿ ಮಾಡಿಕೊಳ್ಳಲಾಗಿದೆ. ರಾಜಕಾಲುವೆಯ ಅಂಚಿನಲ್ಲೇ ಇರುವ ವಸತಿ ಪ್ರದೇಶದಲ್ಲಿ ಈ ಕಟ್ಟಡವಿದೆ ಎಂದು ನಿವಾಸಿಯೊಬ್ಬರು ಹೇಳಿದರು.
‘ಬಾರ್ ಇರುವುದು ನಮ್ಮ ಗಮನಕ್ಕೆ ಬಂದಿಲ್ಲ. ನೋಡಿ ಹೇಳುತ್ತೇನೆ’ ಎಂದು ಬಿಬಿಎಂಪಿಯ ಆರೋಗ್ಯ ನಿರೀಕ್ಷಕ ವೆಂಕಟೇಶ್ ಹೇಳಿದರು.
ಈ ಬಗ್ಗೆ ಬಿಬಿಎಂಪಿಯ ಕಾರ್ಯನಿರ್ವಾಹಕ ಎಂಜಿನಿಯರ್ (ರಾಜಕಾಲುವೆ) ಹನುಮಂತರಾಯಪ್ಪ ಪ್ರತಿಕ್ರಿಯಿಸಿ, ‘ಇದು ನನ್ನ ಗಮನಕ್ಕೆ ಬಂದಿಲ್ಲ, ಪರಿಶೀಲಿಸುತ್ತೇನೆ’ ಎಂದು ಹೇಳಿದರು.
ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತರಾದ ಡಾ.ಸೌಜನ್ಯಾ, ‘ತಕ್ಷಣವೇ ವರದಿ ತರಿಸಿಕೊಳ್ಳಲಾಗುತ್ತದೆ. ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.