ಬೆಂಗಳೂರು: 2020ರ ಬಿಬಿಎಂಪಿ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧಾರಿಸಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ನೀಡಿದೆ.
ಸಾಮಾಜಿಕ ಕಾರ್ಯಕರ್ತ ಸಿ.ಎನ್. ದೀಪಕ್ ಮತ್ತು ಇತರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
‘ಹೊಸ ಕಾಯ್ದೆ ಪ್ರಕಾರ ವಾರ್ಡ್ ಸಮಿತಿಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಅನುದಾನ ಹಂಚಿಕೆಯ ಅಧಿಕಾರ ಕ್ಷೇತ್ರವಾರು ಸಮಿತಿ ಮತ್ತು ವಲಯವಾರು ಸಮಿತಿಗಳಿಗೆ ನೀಡಲಾಗಿದೆ. ಇದು ಸಂವಿಧಾನದ 243ನೇ ವಿಧಿಯ ಉಲ್ಲಂಘನೆ’ ಎಂದು ಅರ್ಜಿದಾರರು ದೂರಿದ್ದಾರೆ.
‘ಬಿಬಿಎಂಪಿಗೆ ಪ್ರತ್ಯೇಕ ಕಾನೂನು ರೂಪಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿಲ್ಲ’ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಲ್.ಎಸ್. ಮಲ್ಲಿಕಾರ್ಜನ ಸಲ್ಲಿಸಿರುವ ಅರ್ಜಿಯನ್ನೂ ಒಟ್ಟಿಗೆ ವಿಚಾರಣೆ ನಡೆಸಲು ಪೀಠ ನಿರ್ಧರಿಸಿತು.