ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಗೆ ₹ 4 ಕೋಟಿ ಬಾಕಿ ಉಳಿಸಿಕೊಂಡ ಬೆಂಗಳೂರು ವಿವಿ

ಸೇವಾ ಶುಲ್ಕ, ಆಸ್ತಿ ತೆರಿಗೆ ಪಾವತಿ ಸಲುವಾಗಿ ಜಾರಿಗೊಳಿಸಿದ ನೋಟಿಸ್‌ಗೂ ಉತ್ತರವಿಲ್ಲ
Last Updated 23 ಸೆಪ್ಟೆಂಬರ್ 2020, 2:35 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ಸೇರಿ ಬಿಬಿಎಂಪಿಗೆ ಒಟ್ಟು ₹ 4.10 ಕೋಟಿ ಬಾಕಿ ಉಳಿಸಿಕೊಂಡಿದೆ.

ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಪ್ರತಿವರ್ಷವೂ ಈ ಹಳೆ ಬಾಕಿ ವಸೂಲಿಗೆ ನೋಟಿಸ್‌ ಜಾರಿಗೊಳಿಸುತ್ತಲೇ ಇದ್ದಾರೆ. ವಿಶ್ವವಿದ್ಯಾಲಯದ ಕಡೆಯಿಂದ ಯಾವುದೇ ಪ್ರತಿಕ್ರಿಯೆಯೂ ಬರುತ್ತಿಲ್ಲ ಎಂಬುದು ಪಾಲಿಕೆ ಅಧಿಕಾರಿಗಳ ಅಳಲು.

ಈ ಬಾಕಿ ಮೊತ್ತದಲ್ಲಿ ದಂಡನಾ ಬಡ್ಡಿ ಹಾಗೂ ಉಪಕರಗಳು ಒಳಗೊಂಡಿಲ್ಲ. ತೆರಿಗೆ ಪಾವತಿ ವಿಳಂಬವಾದರೆ ಬಿಬಿಎಂಪಿಯು ತಿಂಗಳಿಗೆ ಶೇ 2ರಂತೆ ವರ್ಷಕ್ಕೆ ಶೇ 24ರಷ್ಟು ದಂಡನಾ ಬಡ್ಡಿಯನ್ನೂ ವಿಧಿಸುತ್ತದೆ. ದಂಡನಾ ಬಡ್ಡಿಯ ಮೊತ್ತವನ್ನೂ ಪರಿಗಣಿಸಿದರೆ ವಿಶ್ವವಿದ್ಯಾಲಯವು ಬಿಬಿಎಂಪಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತವು ₹ 9 ಕೋಟಿಗೂ ಅಧಿಕ ಆಗುತ್ತದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದರು.

ಬಿಬಿಎಂಪಿಯು ಕೆಎಂಸಿ ಕಾಯ್ದೆಯನ್ವಯ ಶಿಕ್ಷಣ ಸಂಸ್ಥೆಗಳಿಂದ ಹಾಗೂ ಸರ್ಕಾರಿ ಕಚೇರಿಗಳಿಂದ ಆಸ್ತಿ ತೆರಿಗೆ ವಸೂಲಿ ಮಾಡುವುದಿಲ್ಲ. ಅದರ ಬದಲು ಅವುಗಳ ಒಟ್ಟು ಆಸ್ತಿ ತೆರಿಗೆ ಪ್ರಮಾಣದ ಶೇ 25ರಷ್ಟು ಸೇವಾ ಶುಲ್ಕ ವಿಧಿಸುತ್ತದೆ. 2008ರಲ್ಲಿ ನಗರದ ಹೊರವಲಯದ 110 ಗ್ರಾಮಗಳನ್ನು ಹಾಗೂ ನಗರಸಭೆಗಳನ್ನು ಸೇರಿಸಿ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿತ್ತು. ಅಂದಿನಿಂದಲೂ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಪ್ರಾಂಗಣವು ಬಿಬಿಎಂಪಿ ವ್ಯಾಪ್ತಿಗೆ ಸೇರಿದೆ. ಆ ಬಳಿಕ ವಿಶ್ವವಿದ್ಯಾಲಯವು ಒಮ್ಮೆಯೂ ಆಸ್ತಿ ತೆರಿಗೆಯನ್ನಾಗಲೀ ಸೇವಾ ಶುಲ್ಕವನ್ನಾಗಲೀ ಪಾವತಿಸಿಲ್ಲ.

‘ಜ್ಞಾನಭಾರತಿ ಪ್ರಾಂಗಣದಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಬಳಸುವ ಕಟ್ಟಡಗಳಿಗೆ ನಾವು ಆಸ್ತಿ ತೆರಿಗೆ ವಿಧಿಸುತ್ತಿಲ್ಲ, ಸೇವಾ ಶುಲ್ಕವನ್ನು ಮಾತ್ರ ವಿಧಿಸುತ್ತಿದ್ದೇವೆ. ವಸತಿಗೃಹಗಳು ಹಾಗೂ ಇತರ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿಧಿಸುತ್ತಿದ್ದೇವೆ. ಆದರೆ, ವಿಶ್ವವಿದ್ಯಾಲಯವು ಆಸ್ತಿ ತೆರಿಗೆಯನ್ನಾಗಲೀ, ಸೇವಾ ಶುಲ್ಕವನ್ನಾಗಲೀ ಪಾವತಿಸಿಲ್ಲ’ ಎಂದು ಬಿಬಿಎಂಪಿಯ ಆರ್‌ಆರ್‌ನಗರ ವಲಯದ ಕಂದಾಯ ವಿಭಾಗದ ಉಪ ಆಯುಕ್ತ ಶಿವೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಸಲ ಸೆ.1ರಂದು ಬಾಕಿ ಸೇವಾ ಶುಲ್ಕವನ್ನು ಪಾವತಿಸುವಂತೆ ನೋಟಿಸ್‌ ಜಾರಿಗೊಳಿಸಿದ್ದೇವೆ. ನೋಟಿಸ್‌ ಜಾರಿಯಾದ 15 ದಿನಗಳ ಒಳಗೆ ಬಾಕಿಯನ್ನು ಪಾವತಿಸುವಂತೆ ತಿಳಿಸಿದ್ದೇವೆ. ಈ ಗಡುವು ಮುಗಿದರೂ ವಿಶ್ವವಿದ್ಯಾಲಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಅವರು ತಿಳಿಸಿದರು.

‘ಆಸ್ತಿ ತೆರಿಗೆ ಪಾವತಿಸದಿದ್ದರೆ ಚರಾಸ್ತಿ ಜಪ್ತಿಗೂ ಅವಕಾಶವಿದೆ. ಆದರೆ, ಇದು ಜ್ಞಾನದೇಗುಲ, ಇಂತಹ ಕಠಿಣ ಕ್ರಮಗಳನ್ನು ಅನುಸರಿಸಿದರೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಜಪ್ತಿಗೆ ಮುಂದಾಗಿಲ್ಲ. ಇನ್ನಾದರೂ ಪರಿಸ್ಥಿತಿ ಅರ್ಥೈಸಿಕೊಂಡು ವಿಶ್ವವಿದ್ಯಾಲಯವು ಹಳೆ ಬಾಕಿ ಪಾವತಿಸಬೇಕು’ ಎಂದು ಅವರು ಒತ್ತಾಯಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಕುಲಪತಿ ವೇಣುಗೋಪಾಲ್‌, ‘ಈ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ನಮ್ಮದೂ ಸರ್ಕಾರಿ ಸಂಸ್ಥೆ. ಸರ್ಕಾರ ಅನುದಾನ ನೀಡಿದರೆ, ನಾವು ಬಿಬಿಎಂಪಿಯ ಬಾಕಿ ಪಾವತಿಸಬಹುದು. ಇದುವರೆಗೆ ಏನು ಕ್ರಮಗಳನ್ನು ಅನುಸರಿಸಲಾಗುತ್ತಿತ್ತು, ನಿಯಮಗಳು ಏನು ಹೇಳುತ್ತವೆ ಎಂಬುದನ್ನು ನೋಡಿಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ’ ಎಂದರು.

*************

ಬೆಂಗಳೂರು ವಿಶ್ವವಿದ್ಯಾಲಯವು ಸರ್ಕಾರಿ ಸಂಸ್ಥೆಯಾದರೂ ಪಾಲಿಕೆಗೆ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆಗಳನ್ನು ಕಾಲ ಕಾಲಕ್ಕೆ ಪಾವತಿಸಲೇಬೇಕಾಗುತ್ತದೆ. ಬಾಕಿ ಮೊತ್ತ ವಸೂಲಿಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ
ಬಸವರಾಜು, ವಿಶೇಷ ಆಯುಕ್ತ, ಬಿಬಿಎಂಪಿ (ಕಂದಾಯ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT