ಕೆ.ಆರ್.ಪುರ: ‘ಕೊರೊನಾದಿಂದ ಪಾರಾಗಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಅನುಸರಿಸುತ್ತಿದೆ. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗಿದೆ’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ಬಿಬಿಎಂಪಿ ವತಿಯಿಂದ ಸರ್ವಜ್ಞನಗರ ಕ್ಷೇತ್ರದ ಮಾರುತಿ ಸೇವಾ ನಗರದಲ್ಲಿ ಮಂಗಳವಾರ ಕೋವಿಡ್ ವಾರ್ ರೂಮ್ ಉದ್ಘಾಟಿಸಿ ಮಾತನಾಡಿದರು.
’ಕೋವಿಡ್ ನಿಯಂತ್ರಣ ಮಾಡಲು ನಾಳೆಯಿಂದ ವಲಯವಾರು ಸಭೆ ಆರಂಭಿಸಲಾಗುವುದು. ಶಾಸಕರು, ಸಂಸದರು ಮತ್ತು ಜಂಟಿ ಆಯುಕ್ತರ ಜೊತೆಯಲ್ಲಿ ಕೋವಿಡ್ ನಿಯಂತ್ರಣ ಮಾಡುವ ಕುರಿತು ಚರ್ಚಿಸಲಾಗುವುದು’ ಎಂದು ಅವರು ತಿಳಿಸಿದರು.
’ಬೌರಿಂಗ್ ಆಸ್ಪತ್ರೆಯು ಒಟ್ಟು 650 ಕ್ಕೂ ಹೆಚ್ಚು ಬೆಡ್ಗಳನ್ನು ಹೊಂದಿದ್ದು, 250 ಬೆಡ್ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇದರಲ್ಲಿ 150 ಆಕ್ಸಿಜನ್ ಸಹಿತ ಬೆಡ್ ಗಳು ಸೇರಿವೆ‘ ಎಂದರು.
’ಸರ್ವಜ್ಞನಗರ ಕ್ಷೇತ್ರದ ಎಂಟು ವಾರ್ಡ್ಗಳ ಅನುಕೂಲಕ್ಕಾಗಿ ವಾರ್ ರೂಮ್ ಸ್ಥಾಪಿಸಲಾಗಿದೆ. ಸಾರ್ವಜನಿಕರು ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದು‘ ಎಂದರು.