ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಎಫ್‌ಸಿ: ಸಮಗ್ರ ಪರಿಶೀಲನೆಗೆ ಸರ್ವಪಕ್ಷ ಸಮಿತಿ

ಕೇಬಲ್‌ ಮಾಫಿಯಾ ಜೊತೆ ಅಧಿಕಾರಿಗಳು ಶಾಮೀಲು– ಆರೋಪ
Last Updated 13 ಆಗಸ್ಟ್ 2018, 16:30 IST
ಅಕ್ಷರ ಗಾತ್ರ

ಬೆಂಗಳೂರು: ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ಅಳವಡಿಕೆಗೆ ಪರವಾನಗಿ ನೀಡುವ ವಿಚಾರದಲ್ಲಿ ಸಮಗ್ರ ಬದಲಾವಣೆ ತರುವ ಬಗ್ಗೆ ಅಧ್ಯಯನ ನಡೆಸಲು ಸರ್ವಪಕ್ಷಗಳ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸುವುದಾಗಿ ಮೇಯರ್‌ ಆರ್.ಸಂಪತ್‌ರಾಜ್‌ ತಿಳಿಸಿದರು.

ಒಎಫ್‌ಸಿ ಶುಲ್ಕ ಸಂಗ್ರಹ ವಿಚಾರದಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ ಎಂದು ಬುಧವಾರ ನಡೆದ ಪಾಲಿಕೆ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದೆ ಮೇಯರ್‌, ‘ ಅಕ್ರಮಗಳ ಬಗ್ಗೆಯೂ ಸಮಿತಿ ಪರಿಶೀಲಿಸಲಿ’ ಎಂದರು.

ಕಾಂಗ್ರೆಸ್‌ ಸದಸ್ಯ ಎಂ.ಕೆ.ಗುಣಶೇಖರ, ‘ಕೇಬಲ್‌ ಮಾಫಿಯಾ ಜೊತೆ ಅಧಿಕಾರಿಗಳು ಶಾಮೀಲಾಗಿರುವುದರಿಂದ ಪಾಲಿಕೆಗೆ ಪರವಾನಗಿ ಶುಲ್ಕ ಹಾಗೂ ದಂಡನಾ ಶುಲ್ಕ ವಸೂಲಿ ಸರಿಯಾಗಿ ಆಗುತ್ತಿಲ್ಲ. ಇದರಿಂದ ಪಾಲಿಕೆ ವರಮಾನ ಖೋತಾ ಆಗುತ್ತಿದೆ’ ಎಂದು ಆರೋಪಿಸಿದರು.

‘ನಗರದಲ್ಲಿ 30ಕ್ಕೂ ಹೆಚ್ಚು ಕಂಪನಿಗಳು ಕೇಬಲ್ ಅಳವಡಿಸಿವೆ. ಆದರೆ, ಕೇವಲ 09 ಕಂಪನಿಗಳು ಕಾರ್ಯಾಚರಿಸುತ್ತಿವೆ ಎಂದು ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. 2013ರಿಂದ 2016ರ ನಡುವೆ ಮೂರು ವರ್ಷಗಳಲ್ಲಿ ರಸ್ತೆ ಕತ್ತರಿಸಲು ನೀಡಿದ್ದ ಪರವಾನಗಿ ಶುಲ್ಕದಿಂದ ₹ 276 ಕೋಟಿ ಸಂಗ್ರವಾಗಿದೆ ಎಂದು ತಿಳಿಸಿದ್ದಾರೆ. ಇದುವರೆಗಿನ ಪೂರ್ಣ ಮಾಹಿತಿ ಒದಗಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯ ಬಿ.ಎಸ್‌.ಸತ್ಯನಾರಾಯಣ, ‘ಕಂಪನಿಗಳಿಂದ ಶುಲ್ಕ ಸಂಗ್ರಹಿಸಲು ಪಾಲಿಕೆ ಸದಸ್ಯರ ತಂಡ ರಚಿಸಿದಾಗ ಒಂದೇ ವರ್ಷದಲ್ಲಿ ₹ 268 ಕೋಟಿ ಶುಲ್ಕ ಸಂಗ್ರಹವಾಗಿತ್ತು. ಮೂರು ವರ್ಷಗಳಲ್ಲಿ ₹ 276 ಕೋಟಿ ಮಾತ್ರ ಸಂಗ್ರಹವಾಗಿದೆ ಎಂದರೆ ಏನರ್ಥ’ ಎಂದು ಪ್ರಶ್ನಿಸಿದರು.

‘ಮೂರು ವರ್ಷಗಳಲ್ಲಿ ಅನೇಕ ಬಾರಿ ಸೇವಾ ಕಂಪನಿಗಳಿಗೆ ಅನಧಿಕೃತ ಕೇಬಲ್‌ ತೆಗೆಯುವಂತೆ ಸೂಚನೆ ನೀಡಿದ್ದರೂ ತೆರವುಗೊಳಿಸಿಲ್ಲ. ಪಾಲಿಕೆ ವತಿಯಿಂದಲೇ ತೆರವುಗೊಳಿಸಿದಾಗ, ಗ್ರಾಹಕರಿಗೆ ತೊಂದರೆ ಆಗುತ್ತದೆ ಎಂದು ಗುಲ್ಲೆಬ್ಬಿಸಿದ್ದಾರೆ’ ಎಂದು ಗುಣಶೇಖರ ದೂರಿದರು.

‘ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದಾಗ ಕೇಬಲ್‌ ತೆರವು ಕಾರ್ಯಾಚರಣೆ ನಡೆಸಿದ್ದೆ. ಆಗ ಎಂಜಿನಿಯರ್‌ ಒಬ್ಬರು ಕೇಬಲ್‌ ಮಾಫಿಯಾದವರೊಬ್ಬರಲ್ಲಿ, ‘ಇವರು ಒಂದೆರಡು ತಿಂಗಳಷ್ಟೇ ಅಧ್ಯಕ್ಷರಾಗಿರುತ್ತಾರೆ. ಈಗ ತೆಗೆಸಿದ ಕೇಬಲ್‌ ಮತ್ತೆ ಅಳವಡಿಸಬಹುದು’ ಎಂದು ಪಿಸುಮಾತಿನಲ್ಲಿ ಹೇಳಿದ್ದನ್ನು ಕೇಳಿಸಿಕೊಂಡಿದ್ದೆ. ಪಾಲಿಕೆ ವರಮಾನ ಹೆಚ್ಚಳದ ಬಗ್ಗೆ ಅಧಿಕಾರಿಗಳ ಕಾಳಜಿಯನ್ನು ಇದು ತೋರಿಸುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಪ್ರತಿ ಕಿ.ಮೀ ಕೇಬಲ್‌ ಅಳವಡಿಕೆಗೆ ₹ 5 ಲಕ್ಷ ಶುಲ್ಕ ವಸೂಲಿ ಮಾಡಲು ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ ಅವಕಾಶ ಕಲ್ಪಿಸಿದೆ. ನಮ್ಮಲ್ಲಿ ಈಗಲೂ ಕೇವಲ ₹ 50 ಸಾವಿರ ವಸೂಲಿ ಮಾಡಲಾಗುತ್ತಿದೆ. ಪಾಲಿಕೆ ಆದಾಯ ಹೆಚ್ಚಿಸುವ ಪರ್ಯಾಯ ಮಾರ್ಗಗಳತ್ತಲೂ ಆಲೋಚನೆ ಮಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT