ಬೆಂಗಳೂರು: ನಗರದಲ್ಲಿ ಖಾಲಿ ನಿವೇಶನಗಳಲ್ಲಿ ತ್ಯಾಜ್ಯವಿದ್ದರೆ ಅದರ ಮಾಲೀಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಲಿದೆ.
ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ತೆರವಿಗೆ ಈ ಹಿಂದೆ ದಂಡ ವಿಧಿಸಲಾಗುತ್ತಿತ್ತು. ಇದನ್ನು ಪುನಃ ಜಾರಿಗೆ ತರಲಾಗುತ್ತದೆ. ಇನ್ನೊಂದು ತಿಂಗಳ ಗಡುವು ನೀಡಲಾಗುತ್ತಿದ್ದು, ಅಷ್ಟರಲ್ಲಿ ಮಾಲೀಕರು ಖಾಲಿನಿವೇಶನದಲ್ಲಿನ ತ್ಯಾಜ್ಯವನ್ನುತೆರವುಗೊಳಿಸಬೇಕು ಎಂದು ಬಿಬಿಎಂಪಿ ಕಸ ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಕೆ.ಹರೀಶ್ ಕುಮಾರ್ ಶುಕ್ರವಾರ ತಿಳಿಸಿದರು.
ಖಾಲಿ ನಿವೇಶನದಲ್ಲಿ ತ್ಯಾಜ್ಯವಿದ್ದರೆ ಅದನ್ನು ಬಿಬಿಎಂಪಿ ತೆರವು ಮಾಡುತ್ತದೆ. ಇದಕ್ಕೆ ಚದರ ಅಡಿಗೆ ₹2 ಶುಲ್ಕ ವಿಧಿಸಲಾಗುತ್ತದೆ. ಎರಡನೇ ಬಾರಿಯೂ ಶುಲ್ಕ ವಿಧಿಸಿ ತೆರವು ಮಾಡಲಾಗುತ್ತದೆ. ಮೂರನೇ ಬಾರಿ ಇದು ಮುಂದುವರಿದರೆ ಮಾಲೀಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ವಿವರನೀಡಿದರು.
ಶುಲ್ಕ ಕಟ್ಟದಿದ್ದರೆ ಏನಾಗುತ್ತದೆ ಎಂದು ಸುಮ್ಮನಿರುವಂತಿಲ್ಲ. ಎರಡು ಬಾರಿ ವಿಧಿಸುವ ಶುಲ್ಕವನ್ನು ಆಸ್ತಿ ತೆರಿಗೆಗೆ ಸೇರಿಸಲಾಗುತ್ತದೆ. ಇದನ್ನು ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲಾಗುತ್ತದೆ ಎಂದರು.
ಏಕಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ. ವಲಯಗಳಲ್ಲಿ ದಿಢೀರ್ ತಪಾಸಣೆ ಮಾಡಲಾಗುತ್ತದೆ. ಜೊತೆಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತದೆ. ಪ್ರತಿ ವಾರ, ಪ್ರತಿ ವಲಯದಲ್ಲೂ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಹರೀಶ್ಕುಮಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.