ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳರಿಗೆ ‘ಶುಭ’ ಶುಕ್ರವಾರ?

Last Updated 19 ಮೇ 2018, 12:00 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಜನವರಿ ಒಂದರಿಂದ ಮೇ 18ರವರೆಗೆ 18 ಬೈಕ್‌ಗಳು ಹಾಗೂ ಒಂದು ಕಾರು ಕಳವಾಗಿವೆ. ಇವುಗಳಲ್ಲಿ ನಗರದಲ್ಲಿ ನಡೆದ ಕಳ್ಳತನಗಳಲ್ಲಿ ಒಂದು ಬೈಕ್‌ ಕಳವು  ಹೊರತುಪಡಿಸಿ ಉಳಿದೆಲ್ಲವು  ಆಗಿರುವುದು ಶುಕ್ರವಾರವೇ ಎನ್ನುವುದು ವಿಶೇಷವಾಗಿದೆ.

ಮೇ 4ರಂದು (ಶುಕ್ರವಾರ) ಮಾಲಾದೇವಿ ಮೈದಾನದ ಸಮೀಪ ಕೆಟಿಎಂ ಬೈಕ್, ಮೇ 11ರಂದು (ಶುಕ್ರವಾರ) ಮಾರುತಿಗಲ್ಲಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಳವಾಗಿತ್ತು. ಈ ಗುರುವಾರ (ಮೇ 17) ಮಧ್ಯರಾತ್ರಿ ಮಾಲಾದೇವಿ ಮೈದಾನದ ಎದುರಿನ ಮಹಾಲಕ್ಷ್ಮಿ ಗೃಹೋಪಯೋಗಿ ಮಳಿಗೆಯ ಮುಂದೆ ಇಟ್ಟಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯಲು ಪ್ರಯತ್ನ ಮಾಡಲಾಗಿದೆ.

ಇದು ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ನಗರ ಠಾಣೆಯ ಪೊಲೀಸರು ವಿವಿಧ ಲಾಡ್ಜ್‌ಗಳಿಗೆ ತೆರಳಿ ಕಳ್ಳನ ಚಹರೆ ಪತ್ತೆಗೆ ಪ್ರಯತ್ನಿಸಿದ್ದಾರೆ. ಆದರೆ, ಯಾರೂ ಪತ್ತೆಯಾಗಿಲ್ಲ.

ಕಾಲೇಜು ಕಿಟಕಿಗೆ ಹಾನಿ: ನಗರದ ಜೈಲ್‌ ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡದ ಕಿಟಕಿ ಗಾಜುಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದು, ಈ ಬಗ್ಗೆ ಪ್ರಾಂಶುಪಾಲ ವಿ.ಎಂ.ಹೆಗಡೆ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಸಂಜೆಯ ವೇಳೆಗೆ ಕಾಲೇಜಿನ ಬಳಿ ಗುಂಪಾಗಿ ಬರುವ ಕೆಲವರೇ ಈ ಕೃತ್ಯ ಎಸಗಿರಬಹುದು ಎಂದು ಸಿಬ್ಬಂದಿ ಶಂಕಿಸಿದ್ದಾರೆ. ಈ ಬಗ್ಗೆ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದು, ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕಾಲೇಜಿನ ನೂತನ ಕಟ್ಟಡಕ್ಕೆ ಕಾಲೇಜು ಆಡಳಿತ ಮಂಡಳಿ ಸಿಸಿಟಿವಿ ಕ್ಯಾಮೆರಾಗಳನ್ನು ಈವರೆಗೂ ಅಳವಡಿಸಿಲ್ಲ. ಇದು ಕೃತ್ಯ ನಡೆಸಲು ವರದಾನವಾದಂತಾಗಿದೆ. ಕಿಟಕಿ ಗಾಜುಗಳನ್ನು ಒಡೆದಿರುವ ಕಿಡಗೇಡಿಗಳು, ಕೊಠಡಿಗಳ ಬಾಗಿಲುಗಳ ಬೀಗಕ್ಕೆ ಕಲ್ಲಿನಿಂದ ಜಜ್ಜಿರುವ ಗುರುತುಗಳು ಕೂಡ ಕಂಡುಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT