ಡಾ.ಡಿ.ಆರ್.ಅಶೋಕ್ ಅವರು ಪಾಲಿಕೆಯ ದಾಸರಹಳ್ಳಿ ವಲಯ ಜಂಟಿ ಆಯುಕ್ತರಾಗಿದ್ದರು. ಅವರ ಜಾಗಕ್ಕೆ ರಾಜೀವ್ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ (ಸಾಮಾಜಿಕ ಅಭಿವೃದ್ಧಿ) ಎಸ್.ಎನ್.ಪರಶುರಾಮೇಗೌಡ ಅವರನ್ನು ನೇಮಕ ಮಾಡಲು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಜುಲೈ 19ರಂದು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಿತು. ಪರಶುರಾಮೇಗೌಡ ಅವರನ್ನು ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆ ಜುಲೈ 22ರಂದು ಆದೇಶ ಹೊರಡಿಸಿತು. ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದ ಅವಧಿಯಲ್ಲೇ ತರಾತುರಿಯಲ್ಲಿ ಈ ನೇಮಕ ಪ್ರಕ್ರಿಯೆ ನಡೆದಿದೆ. ಈ ನೇಮಕಾತಿಗೆ ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನು ಗಣನೆಗೆ ತೆಗೆದುಕೊಳ್ಳದೆ ಪ್ರಕ್ರಿಯೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.