ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಭಿಕ್ಷಾಟನೆ ಮಾಡುವ ಮತ್ತು ಟ್ರಾಫಿಕ್ ಸಿಗ್ನಲ್ಗಳಲ್ಲಿ ಆಟಿಕೆ ಮಾರಾಟ ಮಾಡುವ ಮಕ್ಕಳ ಸರ್ವೆ ನಡೆಸಲು ಬಿಬಿಎಂಪಿ ಮುಂದಾಗಿದೆ.
ಈ ಸಂಬಂಧ ಪಾಲಿಕೆ ಕಚೇರಿಯಲ್ಲಿ ಸಭೆ ನಡೆಸಿದ ಆಯುಕ್ತ ಎನ್. ಮಂಜುನಾಥ ಪ್ರಸಾದ್, ‘8 ವಲಯಗಳಲ್ಲಿ ಭಿಕ್ಷೆ ಬೇಡುವ ಅಥವಾ ಟ್ರಾಫಿಕ್ ಸಿಗ್ನಲ್ಗಳ ಬಳಿ ಆಟಿಕೆ ಅಥವಾ ವಸ್ತುಗಳನ್ನು ಮಾರಾಟ ಮಾಡುವಂತಹ ಮಕ್ಕಳು ನಿಖರ ಮಾಹಿತಿ ಬಗ್ಗೆ ತ್ವರಿತಗತಿಯಲ್ಲಿ ಸರ್ವೆ ಮಾಡಿ ಪಟ್ಟಿ ಸಿದ್ಧಪಡಿಸಬೇಕು. ಈ ಸಂಬಂಧ ಎಲ್ಲಾ ವಲಯ ಜಂಟಿ ಆಯುಕ್ತರು ಹಾಗೂ ಆಯಾ ವಲಯಕ್ಕೆ ಸಂಬಂಧಿಸಿದ ಅಧಿಕಾರಿಗಳು ರಾತ್ರಿ 8 ರಿಂದ ಮಧ್ಯರಾತ್ರಿ 12ರವರೆಗೆ ತಪಾಸಣೆ ನಡೆಸಿ ಪಟ್ಟಿ ತಯಾರಿಸಬೇಕು’ ಎಂದು ತಿಳಿಸಿದರು.
‘ದಿನನಿತ್ಯದ ಕೆಲಸ ಜತೆಗೆ ಹೆಚ್ಚುವರಿಯಾಗಿ ಈ ಕೆಲಸ ಮಾಡಬೇಕು. ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಕೊಳಚೆ ಪ್ರದೇಶಗಳಲ್ಲಿನ ಎಲ್ಲಾ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು’ ಎಂದು ಹೇಳಿದರು.
‘ಪಾದಚಾರಿ ಮಾರ್ಗ, ರೈಲು ನಿಲ್ದಾಣ, ಬಸ್ ನಿಲ್ದಾಣ, ಮೆಟ್ರೊ ರೈಲು ನಿಲ್ದಾಣ, ಮಾರುಕಟ್ಟೆ ಸೇರಿ ಇನ್ನಿತರೆ ಸ್ಥಳಗಳಲ್ಲಿ ಮಲಗುವ ಮಕ್ಕಳು ಮತ್ತು ವಯಸ್ಕರರು ಎಲ್ಲಿಂದ ಬಂದಿದ್ದಾರೆ. ಯಾವ ಕಾರಣಕ್ಕೆ ಭಿಕ್ಷೆ ಬೇಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಬೇಕು’ ಎಂದು ತಿಳಿಸಿದರು.