ಬೆಂಗಳೂರು: ಬಿಬಿಎಂಪಿಗೆ ಎರವಲು ಸೇವೆ ಮೇಲೆ ನೌಕರರನ್ನು ನಿಯೋಜನೆ ಮಾಡಿಕೊಳ್ಳುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಹೊಸ ನೀತಿ ರೂಪಿಸಿದ್ದು, ಬೇರೆ ಇಲಾಖೆ ನೌಕರರನ್ನು ಐದು ವರ್ಷಕ್ಕೂ ಮೇಲ್ಪಟ್ಟು ಪಾಲಿಕೆಯಲ್ಲಿ ಉಳಿಸಿಕೊಳ್ಳಬಾರದು ಎಂಬ ನಿಯಮ ಜಾರಿಗೊಳಿಸಿದೆ.
ಬಿಬಿಎಂಪಿಯಲ್ಲಿ ಸದ್ಯ 93 ಎಂಜಿನಿಯರ್ಗಳು ಬೇರೆ ಇಲಾಖೆಯವರಾಗಿದ್ದು, ಅವರಲ್ಲಿ 86 ಎಂಜಿನಿಯರ್ಗಳು ಲೋಕೋಪಯೋಗಿ ಇಲಾಖೆ ಒಂದರಿಂದಲೇ ನಿಯೋಜನೆ ಆಗಿದ್ದಾರೆ. ಅವರಲ್ಲಿ ಐದು ವರ್ಷ ಪೂರೈಸಿದ 11 ಎಂಜಿನಿಯರ್ಗಳು ಹೊಸ ನಿಯಮದಂತೆ ಈಗ ಮಾತೃ ಇಲಾಖೆಗೆ ವಾಪಸ್ ಮರಳಬೇಕಿದೆ.
‘ಪಾಲಿಕೆಗೆ ಎಲ್ಲ ಇಲಾಖೆಯಿಂದಲೂ ನಿಯೋಜನೆ ಮಾಡಿಕೊಳ್ಳಬಾರದು. ತಾಂತ್ರಿಕ ನೈಪುಣ್ಯ ಹೊಂದಿರುವ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗಳಿಂದ ಮಾತ್ರ ನಿಯೋಜನೆ ಮಾಡಿಕೊಳ್ಳಬಹುದು. ಪರೀಕ್ಷಾರ್ಥ ಅವಧಿ ಮತ್ತು 2 ವರ್ಷ ಸೇವೆ ಸಲ್ಲಿಸಿದ ನಂತರವಷ್ಟೇ ನಿಯೋಜನೆಗೆ ಪರಿಗಣಿಸಬೇಕು’ ಎಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಹೊಸ ಆದೇಶದಲ್ಲಿ ತಿಳಿಸಿದೆ.
‘ಎರವಲು ಸೇವೆಯನ್ನು ಗರಿಷ್ಠ 5 ವರ್ಷಗಳ ತನಕ ಮಾತ್ರ ಪಡೆಯಬಹುದು. ಅವಧಿ ಮುಗಿದ ಬಳಿಕ ಮಾತೃ ಇಲಾಖೆಗೆ ವಾಪಸ್ ಕಳುಹಿಸುವುದು ಕಡ್ಡಾಯ. ಅವಧಿ ಮುಗಿದ ಬಳಿಕವೂ ಬಿಬಿಎಂಪಿಯಿಂದ ವೇತನ ಪಾವತಿ ಮಾಡಿದರೆ ಬಟವಾಡೆ ಅಧಿಕಾರಿಯಿಂದ ಆ ಮೊತ್ತ ವಸೂಲು ಮಾಡಬೇಕು’ ಎಂದು ವಿವರಿಸಿದೆ.
‘ಸರ್ಕಾರದ ಅನುಮೊದನೆ ನಿರೀಕ್ಷಿಸಿ ನಿಯೋಜನೆ ಅಥವಾ ಮುಂದುವರಿಸಲು ಅವಕಾಶ ಇಲ್ಲ. ಯಾವುದೇ ಸಂದರ್ಭದಲ್ಲೂ ನಿಯೋಜಿತ ನೌಕರರನ್ನು ಬಿಬಿಎಂಪಿಯ ವೃಂದ ಹುದ್ದೆಗಳಲ್ಲಿ ವಿಲೀನ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಬಾರದು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗಂಭೀರ ಆರೋಪಗಳು ಬಂದಾಗ ಮಾತೃ ಇಲಾಖೆಗೆ ಹಿಂದಿರುಗಿಸಿದ್ದಲ್ಲಿ ಪುನರ್ ನಿಯೋಜನೆ ನಂತರ ಅದೇ ಹುದ್ದೆಯಲ್ಲಿ ಮುಂದುರಿಸಕೂಡದು ಎಂದೂ ಹೊಸ ನಿಯಮಾವಳಿಗಳಲ್ಲಿ ಉಲ್ಲೇಖಿಸಲಾಗಿದೆ.