ಬೆಂಗಳೂರು: ನಗರದ ಮೇಖ್ರಿ ವೃತ್ತದಲ್ಲಿ ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘ–ಸಂಸ್ಥೆಗಳು ಅನಧಿಕೃತವಾಗಿ ಅಳವಡಿಸಿದ್ದ ಜಾಹೀರಾತು ಫಲಕಗಳನ್ನು ತೆರವುಗೊಳಿಸಿದ ಬಿಬಿಎಂಪಿ ಅಧಿಕಾರಿಗಳು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಪಾಲಿಕೆ ಅನುಮತಿ ಪಡೆಯದೆಯೇ ಟ್ರುಪ್ಲೋ ಬೈ ಹಿಂದ್ ವೇರ್, ಎ–ವನ್ ಗೋಲ್ಡ್ ಮತ್ತು ಆರೋಗ್ಯ ಇಲಾಖೆಯು ಜಾಹೀರಾತು ಫಲಕವನ್ನು ಅಳವಡಿಸಿದೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸದಾಶಿವನಗರ ಪೊಲೀಸ್ ಠಾಣೆಗೆ ಪಾಲಿಕೆ ಸಹಾಯಕ ಕಂದಾಯ ಅಧಿಕಾರಿ ರೂಪಾ ದೂರು ನೀಡಿದ್ದಾರೆ.
‘ಪಾಲಿಕೆ ವ್ಯಾಪ್ತಿಯಲ್ಲಿ ಯಾರೇ ಜಾಹೀರಾತು ಫಲಕ ಅಳವಡಿಸಬೇಕಿದ್ದರೂ ಬಿಬಿಎಂಪಿ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಪಡೆಯದೆ ಅಳವಡಿಸಿದ್ದರಿಂದ ಮೇಲಾಧಿಕಾರಿಗಳ ಸೂಚನೆಯಂತೆ ತೆರವುಗೊಳಿಸಿ ದೂರು ನೀಡಲಾಗಿದೆ’ ಎಂದು ರೂಪಾ ತಿಳಿಸಿದರು.