ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿ ರುವ ಮನೆಗಳನ್ನು ಸಕ್ರಮಗೊಳಿಸುವ ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ 2020’ ಕ್ಕೆ ವಿಧಾನಸಭೆ ಒಪ್ಪಿಗೆ ನೀಡಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಸೂದೆ ಮಂಡಿಸಿದರು. ರಾಜ್ಯದ ಇತರ ನಗರಗಳಲ್ಲೂ ಇಂತಹದ್ದೇ ಸಮಸ್ಯೆ ಇರುವುದರಿಂದ ಇದೇ ಮಾದರಿಯ ಕಾನೂನು ಅಲ್ಲಿಗೂ ಜಾರಿ ಮಾಡಬೇಕು ಎಂದು ಇತರ ಜಿಲ್ಲೆಗಳ ಶಾಸಕರೂ ಆಗ್ರಹಿಸಿದರು.
ಜೆಡಿಎಸ್ನ ಎ.ಟಿ.ರಾಮಸ್ವಾಮಿ ಮಾತನಾಡಿ, ಈ ತಿದ್ದುಪಡಿ ಬಡವರ ಹಿತದ ಉದ್ದೇಶ ಹೊಂದಿಲ್ಲ. ಬಲಾಢ್ಯರು, ಅಕ್ರಮ ಮಾಡುವವರಿಗೆ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಬಿಬಿಎಂಪಿ ಚುನಾವಣೆ ಬರುತ್ತಿರುವುದರಿಂದ, ಈ ಕಾನೂನು ಮಾಡಲು ಹೊರಟಿದ್ದಾರೆ ಎಂದು ದೂರಿದರು.
ಹಲವು ಸರ್ಕಾರಗಳು ಬಂದು ಹೋದರೂ ಈ ಸಮಸ್ಯೆಗೆ ನಿಶ್ಚಿತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಸರ್ಕಾರಕ್ಕೆ ತೆರಿಗೆಯೂ ಪಾವತಿ ಆಗುತ್ತಿರಲಿಲ್ಲ. ಈ ಸಮಸ್ಯೆ ಮುಂದುವರಿಸಿಕೊಂಡು ಹೋಗಬಾರದು ಎಂಬ ಕಾರಣಕ್ಕೆ ಸಕ್ರಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.