ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ.
‘ಯಾರಾದರೂ ಅಗತ್ಯ ಕೆಲಸಗಳಿಗೆ ಕೇಂದ್ರ ಕಚೇರಿಗೆ ಭೇಟಿ ನೀಡುವುದಿದ್ದರೂ ಮುಂಚಿತವಾಗಿ ಸಮಯ ನಿಗದಿಪಡಿಸಿಕೊಳ್ಳಬೇಕು’ ಎಂದು ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಗಿರೀಶ ಎಲ್.ಪಿ ತಿಳಿಸಿದರು.
‘ಬೆ೦ಗಳೂರು ನಗರದಲ್ಲಿ ಕರೋನಾ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಚರ್ಚಿಸಲು ಪ್ರಾಧಿಕಾರದ ಆಯುಕ್ತರಾದ ಡಾ.ಎಚ್.ಆರ್.ಮಹಾದೇವ್ ಅವರು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.’
‘ಸಾರ್ವಜನಿಕರಿಗೆ ಮತ್ತು ರೈತರಿಗೆ ನೆರವು ನೀಡಲು ಪ್ರಾಧಿಕಾರದಲ್ಲಿ ಸಹಾಯವಾಣಿ ತೆರಯಲಾಗಿದೆ. ಅವರು ಪ್ರಾಧಿಕಾರದಿ೦ದ ಆಗಬೇಕಾದ ಕಾರ್ಯಗಳ ಬಗ್ಗೆ ಫೋನ್ ಮಾಡಿ ತಿಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರಿಗೆ ತಲುಪಿಸಲಾಗುವುದು. ಇ-ಮೇಲ್ ಮೂಲಕವೂ ಪ್ರಾಧಿಕಾರ ಸಂಪರ್ಕಿಸಬಹುದು’ ಎಂದು ಅವರು ವಿವರಿಸಿದರು.
‘ಪ್ರಾಧಿಕಾರದಲ್ಲಿ ಎಂದಿನಂತೆ ನೋಂದಣಿ ಕಾರ್ಯ ಮುಂದುವರಿಯಲಿದೆ. ನೋಂದಣಿಗೆ ಸಂಬಂಧಪಟ್ಟಂತೆ ಹಂಚಿಕೆದಾರರು ದೂರವಾಣಿಯ ಮೂಲಕ ಸಂಬಂಧಪಟ್ಟ ವಿಭಾಗದಲ್ಲಿ ನೋಂದಣಿ ದಿನಾಂಕ ನಿಗದಿಪಡಿಸಿಕೊಂಡು ಭೇಟಿ ನೀಡಬೇಕು. ಅಹವಾಲುಗಳನ್ನು, ಮನವಿಗಳನ್ನು ನೋಂದಾಯಿತ ಅ೦ಚೆ ಮೂಲಕ ಕಳುಹಿಸಬಹುದು’ ಎಂದರು.