ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: 1 ಎಕರೆ 12 ಗುಂಟೆ ಜಾಗದ ಒತ್ತುವರಿ ತೆರವು

Last Updated 8 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬನಶಂಕರಿ ಮೂರನೇ ಹಂತದ ಆವಲಹಳ್ಳಿಯಲ್ಲಿ 1 ಎಕರೆ 6 ಗುಂಟೆ ಮತ್ತು ಎಚ್ಆರ್‌ಬಿಆರ್ ಬಡಾವಣೆಯಲ್ಲಿ 6 ಸಾವಿರ ಚದರಡಿಯ ನಿವೇಶನದ ಒತ್ತುವರಿಯನ್ನು ಬುಧವಾರ ತೆರವುಗೊಳಿಸಿದೆ. ಇವುಗಳ ಮೌಲ್ಯ ₹ 75 ಕೋಟಿ ಎಂದು ಬಿಡಿಎ ಅಂದಾಜಿಸಿದೆ.

ಆವಲಹಳ್ಳಿಯಲ್ಲಿ ಬಿಡಿಎಗೆ ಸೇರಿದ ಜಾಗದಲ್ಲಿ 6 ತಾತ್ಕಾಲಿಕ ಶೆಡ್‌ಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಈ ಜಾಗದ ಮಾಲೀಕತ್ವದ ವ್ಯಾಜ್ಯದಲ್ಲಿ ಬಿಡಿಎ ಪರವಾಗಿ ನ್ಯಾಯಾಲಯ ತೀರ್ಪು ನೀಡಿತ್ತು. ಪ್ರಾಧಿಕಾರದ ವಿಶೇಷ ಜಾಗೃತ ದಳದ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮತ್ತು ಇನ್‌ಸ್ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ಸ್ಥಳೀಯ ಪೊಲೀಸರ ಸಹಕಾರದಿಂದ ಶೆಡ್‌ಗಳನ್ನು ನೆಲಸಮ ಮಾಡಲಾಯಿತು. ಇದರ ಈಗಿನ ಮಾರುಕಟ್ಟೆ ದರ ಸುಮಾರು ₹65 ಕೋಟಿ ಎಂದು ಅಂದಾಜಿಸಲಾಗಿದೆ.

ಎಚ್ಆರ್‌ಬಿಆರ್ ಬಡಾವಣೆಯ ಮೂರನೇ ಹಂತದಲ್ಲಿರುವ ಕಾಚರಕನಹಳ್ಳಿಯ ಸರ್ವೆ ನಂಬರ್ 60/1ರಲ್ಲಿ 6 ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ಒತ್ತುವರಿದಾರರು ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರು. ಕಾರ್ಯಪಾಲಕ ಎಂಜಿನಿಯರ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ನಿವೇಶನವನ್ನು ಸ್ವಾಧೀನಕ್ಕೆ ಪಡೆಯಿತು. ಈ ನಿವೇಶನದ ಮಾರುಕಟ್ಟೆ ದರ ₹ 10 ಕೋಟಿ ಎಂದು ಅಂದಾಜಿಸಲಾಗಿದೆ.

‘ನಗರದ ವಿವಿಧ ಬಡಾವಣೆಗಳಲ್ಲಿ ಬಿಡಿಎಗೆ ಸೇರಿದ ಸ್ವತ್ತುಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ₹ 1 ಸಾವಿರ ಕೋಟಿಗೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಭೂಕಬಳಿಕೆದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೇ ನಮ್ಮ ಸ್ವತ್ತುಗಳನ್ನು ವಶಕ್ಕೆ ಪಡೆಯಲಿದ್ದೇವೆ’ ಎಂದುಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದರು.

‘ಬಿಡಿಎಗೆ ಸೇರಿದ 400 ಎಕರೆಗಳಷ್ಟು ಜಾಗ ಒತ್ತುವರಿಯಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಸ್ವತ್ತುಗಳ ಬೆಲೆ ಸುಮಾರು ₹ 25 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಇವುಗಳನ್ನು ಹಂತ ಹಂತವಾಗಿ ವಶಕ್ಕೆ ತೆಗೆದುಕೊಳ್ಳಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT