ಬೆಂಗಳೂರು: ಮಾಜಿ ಸೈನಿಕರೊಬ್ಬರ ಮಗಳಿಗೆ ವಿಶೇಷ ವರ್ಗದ ಮೀಸಲಾತಿ ದೊರಕಿಸಲು ಅನುಮತಿ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ಹೈಕೋರ್ಟ್ ನಿರ್ದೇಶನ ನೀಡಿದೆ.
ಬಿಎಸ್ಎಫ್ ಮಾಜಿ ಯೋಧರ ಮಗಳಾದ ಆರ್. ಅಂಜಲಿ ಎಂಜಿನಿಯರಿಂಗ್ ಕೋರ್ಸ್ ಸೇರಲು ಮೀಸಲಾತಿ ಬಯಸಿದ್ದರು. ಅರ್ಜಿ ಸಲ್ಲಿಸುವಾಗ ಸಣ್ಣ ತಪ್ಪೊಂದನ್ನು ನಮೂದಿಸಿದ್ದರಿಂದ ಮೀಸಲಾತಿ ನೀಡಲು ಕೆಇಎ ನಿರಾಕರಿಸಿತ್ತು.
‘ತಾಂತ್ರಿಕ ತಪ್ಪೊಂದನ್ನು ಮುಂದಿಟ್ಟು ಮೀಸಲಾತಿ ನೀಡದಿದ್ದರೆ ಅದರ ಉದ್ದೇಶವನ್ನೇ ಹಾಳು ಮಾಡಿದಂತೆ ಆಗಲಿದೆ. ಅರ್ಜಿ ತಿರಸ್ಕರಿಸುವ ಮುನ್ನ ಅಭ್ಯರ್ಥಿ ಮತ್ತು ಆಕೆಯ ಪೋಷಕರೊಂದಿಗೆ ಕೆಇಎ ಮಾತುಕತೆ ನಡೆಸಬಹುದಿತ್ತು’ ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ.
‘ವಿದ್ಯಾರ್ಥಿನಿಯ ತಂದೆ ಇಪ್ಪತ್ತು ವರ್ಷಗಳ ಕಾಲ ರಾಷ್ಟ್ರದ ಗಡಿ ರಕ್ಷಣೆ ಮಾಡಿ ನಿವೃತ್ತರಾಗಿದ್ದಾರೆ. ಅಂತವರ ಮಕ್ಕಳಿಗೆ ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ಉದಾರತೆ ಇರಲಿ’ ಎಂದು ಹೇಳಿದರು.