ನಗರದಲ್ಲಿ ಕಳೆದ ಆರು ದಿನಗಳಲ್ಲಿ ಭಾರಿ ಮಳೆ ಸುರಿದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಏಕಾಏಕಿ ಸುರಿದ ಮಳೆಯಿಂದ ಶ್ರೀಸಾಯಿ ಲೇಔಟ್, ಕುಮಾರಸ್ವಾಮಿ ಲೇಔಟ್, ರಾಜೀವ್ಗಾಂಧಿ ನಗರ, ಕಾವೇರಿ ಬಡಾವಣೆ, ಫೈಯಜಾಬಾದ್ ನಗರ ‘ಜಲಮಯ’ಗೊಂಡಿದ್ದವು. ಈಗ ಅಲ್ಲಿ ನೀರು ಇಳಿದಿದ್ದರೂ ನಿವಾಸಿಗಳ ಕಣ್ಣೀರು ನಿಂತಿಲ್ಲ. ಆಗಸ್ಟ್ 1ರಿಂದ 6ರ ತನಕ ವಾಡಿಕೆ ಮಳೆ ಪ್ರಮಾಣ 2.3 ಸೆಂ.ಮೀನಷ್ಟು. ಆದರೆ, 13.7 ಸೆಂ.ಮೀ ಮಳೆ ಸುರಿದು ಪ್ರಮುಖ ಕೆರೆಗಳೆಲ್ಲವೂ ಭರ್ತಿಯಾಗಿವೆ. ಹಲವು ವರ್ಷಗಳಿಂದ ಕೋಡಿ ಬೀಳದಿದ್ದ ಕೆರೆಗಳಲ್ಲೂ ‘ಜಲರಾಶಿ’ ಕಾಣಿಸುತ್ತಿದೆ. ನಗರದ ಹಲವು ಕೆರೆಗಳು ದೊಡ್ಡ ಸಮುದ್ರದಂತೆ ಕಾಣಿಸುತ್ತಿವೆ.