ಬೆಂಗಳೂರು: ಕಾಂಗ್ರೆಸ್ ಪ್ರತಿಭಟನೆ, ರಾಷ್ಟ್ರಪತಿ ಆಗಮನ ಹಾಗೂ ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ... ಇವೆಲ್ಲದರ ಪರಿಣಾಮದಿಂದಾಗಿ ನಗರದ ಬಹುತೇಕ ಕಡೆ ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ವಿಪರೀತ ವಾಹನಗಳ ದಟ್ಟಣೆ ಉಂಟಾಯಿತು.
ಶಾಂತಿನಗರ ಬಸ್ ನಿಲ್ದಾಣ ಬಳಿಯೇ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಾಂತಿನಗರ, ಕೆ.ಎಚ್. ರಸ್ತೆ, ಲಾಲ್ಬಾಗ್ ರಸ್ತೆ, ವಿಲ್ಸನ್ ಗಾರ್ಡನ್, ರಿಚ್ಮಂಡ್ ವೃತ್ತ, ನಿಮ್ಹಾನ್ಸ್, ಡೇರಿ ವೃತ್ತ ಹಾಗೂ ಸುತ್ತಮುತ್ತ ರಸ್ತೆ ಗಳಲ್ಲಿ ವಾಹನಗಳು ನಿಧಾನಗತಿ ಯಲ್ಲಿ ಸಾಗಿದವು.
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ಸೋಮವಾರ ನಗರಕ್ಕೆ ಬಂದರು. ಅವರ ಸಂಚಾರಕ್ಕೆ ರಸ್ತೆಯನ್ನು ಸಿಗ್ನಲ್ ಮುಕ್ತಗೊಳಿಸಲಾಗಿತ್ತು.
ರಾಷ್ಟ್ರಪತಿ ಹಾದು ಹೋಗುವ ರಸ್ತೆಯ ಅಕ್ಕ–ಪಕ್ಕದಲ್ಲಿ ಸಾರ್ವಜನಿಕರ ವಾಹನಗಳನ್ನು ತಡೆಯಲಾಗಿತ್ತು. ಇದರಿಂದಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಾಜಭವನ ರಸ್ತೆ, ವಿಧಾನ ಸೌಧ, ಕೆ.ಆರ್.ವೃತ್ತ, ಬಸವೇಶ್ವರ ವೃತ್ತ, ಬಳ್ಳಾರಿ ರಸ್ತೆಯಲ್ಲಿ ದಟ್ಟಣೆ ಬಿಸಿ ತಟ್ಟಿತು.
ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಎದುರು ಸಂಭವಿಸಿದ ಸರಣಿ ಅಪಘಾತದಿಂದಾಗಿಯೂ ಬೆಳಿಗ್ಗೆ 6.30ರಿಂದ 9 ಗಂಟೆಯವರೆಗೂ ವಾಹನ ದಟ್ಟಣೆ ಉಂಟಾಯಿತು. ಕಚೇರಿಗೆ ತೆರಳುತ್ತಿದ್ದ ಉದ್ಯೋಗಿಗಳು, ಶಾಲಾ ವಿದ್ಯಾರ್ಥಿಗಳು ಹಾಗೂ ಇತರರು ತೊಂದರೆ ಅನುಭ ವಿಸಿದರು.