ಬೆಂಗಳೂರು: ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಭಾನುವಾರ ಸಂಜೆ ಸಾಧಾರಣ ಮಳೆ ಸುರಿಯಿತು.
ಬೆಳಿಗ್ಗೆಯಿಂದಲೇ ನಗರದಲ್ಲಿ ತಂಪಿನ ವಾತಾವರಣವಿತ್ತು. ಕೆಲ ವೇಳೆಬಿಸಿಲು ಕಾಣಿಸಿಕೊಂಡು ನಂತರ ಮಾಯವಾಯಿತು. ಸಂಜೆ ವೇಳೆಯಲ್ಲಿ ಜಿಟಿ ಜಿಟಿಯಾಗಿ ಆರಂಭವಾದ ಮಳೆ, 15 ನಿಮಿಷಗಳವರೆಗೆ ಸುರಿಯಿತು.
ಯಶವಂತಪುರ, ಪೀಣ್ಯ, ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಮೈಸೂರು ರಸ್ತೆಯ ನಾಯಂಡಹಳ್ಳಿ, ದೀಪಾಂಜಲಿನಗರ, ಗಿರಿನಗರ, ಹನುಮಂತನಗರ, ಬಸವನಗುಡಿ, ಜಯನಗರ, ಹೆಬ್ಬಾಳ ಹಾಗೂ ಸುತ್ತಮುತ್ತ ಮಳೆ ಆಯಿತು.
ಭಾನುವಾರ ಸರ್ಕಾರಿ ರಜೆ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಶಾಪಿಂಗ್ಗೆಂದು ಮನೆಯಿಂದ ಹೊರಗೆ ಬಂದಿದ್ದರು. ಬಹುತೇಕರು, ಮಳೆಯಲ್ಲಿ ಸಿಲುಕಿಕೊಂಡರು. ಕೆಲವರು, ರಸ್ತೆಯ ಅಕ್ಕ–ಪಕ್ಕದ ಮಳಿಗೆ ಹಾಗೂ ತಂಗುದಾಣಗಳಲ್ಲಿ ಆಶ್ರಯ ಪಡೆದಿದ್ದ ದೃಶ್ಯಗಳು ಕಂಡುಬಂದವು.
ಚಾಲುಕ್ಯ ವೃತ್ತ, ಮಡಿವಾಳ, ಮೆಜೆಸ್ಟಿಕ್, ಓಕಳಿಪುರ ಹಾಗೂ ಸುತ್ತಮುತ್ತ ವಾಹನಗಳ ಓಡಾಟ ನಿಧಾನಗತಿಯಲ್ಲಿತ್ತು. ಕೆಲವೆಡೆ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲೇ ಚಾಲಕರು ವಾಹನಗಳನ್ನು ಚಲಾಯಿಸಿಕೊಂಡು ಹೋದರು.
‘ನಗರದಲ್ಲಿ ಭಾನುವಾರ ಸಂಜೆ ಸಾಧಾರಣ ಮಳೆಯಾಗಿದೆ. ಹಾನಿ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.