ಬೆಂಗಳೂರು:ಯಾರೂ ಪರಿಪೂರ್ಣರಲ್ಲ. ಎಲ್ಲರಿಗೂ ಒಂದೊಂದು ಬಗೆಯ ಕೊರತೆಗಳಿರುತ್ತವೆ. ಎಲ್ಲರಿಗಿಂತ ಭಿನ್ನ ಕೊರತೆ ಎಂದು ಅಂಗವಿಕಲರು ಭಾವಿಸಬೇಕಾಗಿಲ್ಲ. ಅದನ್ನು ಮನಸ್ಸಿನಿಂದ ಕಿತ್ತೊಗೆದರೆ ಉನ್ನತ ಸ್ಥಾನಕ್ಕೇರುವುದು ಸಾಧ್ಯ ಎಂದುಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಹೇಳಿದರು.
ವಿಶ್ವವಿದ್ಯಾಲಯದ ಬ್ರೈಲ್ ಸಂಪನ್ಮೂಲ ಕೇಂದ್ರ ಮತ್ತು ಎನೇಬಲ್ ಇಂಡಿಯಾ ವತಿಯಿಂದ ಶನಿವಾರ ನಡೆದ ‘ಅಂಧ ವ್ಯಕ್ತಿಗಳಿಗೆ ಉದ್ಯೋಗ ಅವಕಾಶ ಅರಿವು’ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಬ್ರೈಲ್ ಕೇಂದ್ರಮೂರು ವಿಶ್ವವಿದ್ಯಾಲಯಗಳ ಅಧೀನಕ್ಕೆ ಒಳಪಡುತ್ತದೆ. ಆದರೆ ಈಗ ಇರುವ ಕೇಂದ್ರ ಚಿಕ್ಕದು ಎಂಬ ಕಾರಣಕ್ಕೆ ವಿಶಾಲ ಜಾಗಕ್ಕೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಕೇಂದ್ರವನ್ನು ಜ್ಞಾನಭಾರತಿಗೆ ಸ್ಥಳಾಂತರ ಮಾಡುವುದು ಸೂಕ್ತ. ಅಲ್ಲಿ ಸಾಕಷ್ಟು ಜಾಗವಿದೆ ಎಂದರು.
‘ವಿಶೇಷ ವಿದ್ಯಾರ್ಥಿಗಳಿಗೆ ಉದ್ಯೋಗದ ಕೊರತೆ ಎದುರಾಗಿಲ್ಲ. 18 ಸಾವಿರ ವಿಶೇಷ ಮಕ್ಕಳಿಗೆ ತರಬೇತಿ ನೀಡುವ ಅತ್ಯುತ್ತಮ ಕೆಲಸವನ್ನು ಎನೇಬಲ್ ಇಂಡಿಯಾ ಸಂಸ್ಥೆ ಮಾಡಿರುವುದು ಶ್ಲಾಘನೀಯ’ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕುಲಸಚಿವ ಪ್ರೊ.ಬಿ.ಕೆ.ರವಿ, ಅಂಗವಿಕಲವಿದ್ಯಾರ್ಥಿಗಳಲ್ಲಿ ಗಾಯನ ಮತ್ತು ಜ್ಞಾನ ಅಪರಿಮಿತವಾಗಿರುತ್ತದೆ. ಇದು ಅವರಲ್ಲಿರುವ ವಿಶೇಷ ಪ್ರತಿಭೆ. ಈ ಪ್ರತಿಭೆಯನ್ನೇ ಸಾಧನವಾಗಿ ಬಳಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಎನೇಬಲ್ ಇಂಡಿಯಾದ ಗೌರವ ನಿರ್ದೇಶಕ ಪ್ರಾಣೇಶ್ ನಗರಿ, ಪ್ರೀತಿ ಲೋಬೊ, ನವೀನ್ ಕುಮಾರ್, ಜಿ.ಆನಂದ, ಪ್ರೊ.ಜೆ.ಎಸ್.ಅರುಣಲತಾ ಇದ್ದರು.