ಬೆಂಗಳೂರು: ನಗರದ ಹೆಗ್ಗನಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕುಸಿದು ಬಿದ್ದು ಮಂಗಳಾ (36) ಎಂಬುವರು ಮೃತಪಟ್ಟಿದ್ದು, ಈ ಬಗ್ಗೆ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಾಮಾಕ್ಷಿಪಾಳ್ಯ ಬಳಿಯ ಲಕ್ಷ್ಮಣನಗರದ ನಿವಾಸಿ ಮಂಗಳಾ, ಶುಕ್ರವಾರ ಬೆಳಿಗ್ಗೆ 11.20ಕ್ಕೆ ಆಸ್ಪತ್ರೆಗೆ ಹೋಗಿ ಕೋವಿಡ್-19 ಲಸಿಕೆ ಪಡೆದಿದ್ದರು. ನಂತರ, ವಾಪಸು ಮನೆಗೆ ಹೊರಟಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಮನೆ ಹತ್ತಿರದಲ್ಲಿ ಇರುವಾಗಲೇ ಮಾರುಕಟ್ಟೆ ಪ್ರದೇಶದಲ್ಲಿ ಮಂಗಳಾ ದಿಢೀರ್ ಕುಸಿದು ಬಿದ್ದಿದ್ದರು. ರಕ್ಷಣೆಗೆ ಹೋಗಿದ್ದ ಸ್ಥಳೀಯರು, ಮಂಗಳಾ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದೂ ತಿಳಿಸಿದರು.
‘ತಪಾಸಣೆ ನಡೆಸಿದ್ದ ವೈದ್ಯರು, ಮಂಗಳಾ ಅವರು ಮೃತಪಟ್ಟಿರುವುದಾಗಿ ತಿಳಿಸಿದರು. ಮಾಹಿತಿ ಬರುತ್ತಿದ್ದಂತೆ ಆಸ್ಪತ್ರೆಗೆ ಹೋಗಿ ಪರಿಶೀಲಿಸಲಾಗಿದೆ. ಸಂಬಂಧಿಕರಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ’ ಎಂದೂ ಹೇಳಿದರು.
ಕೋವಿಡ್ ಲಸಿಕೆ ಬಗ್ಗೆ ಮಾಹಿತಿ: ‘ಕೋವಿಡ್ ಲಸಿಕೆ ಪಡೆದ ನಂತರ, ಅದರ ಪರಿಣಾಮದಿಂದ ಮಂಗಳಾ ಮೃತಪಟ್ಟಿದ್ದಾರೆಯೇ? ಅಥವಾ ಬೇರೆ ಯಾವುದಾದರೂ ಕಾರಣ ಇದೆಯಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಲಸಿಕೆ ನೀಡಿದ್ದ ಸಿಬ್ಬಂದಿ ಹಾಗೂ ಉಸ್ತುವಾರಿ ವೈದ್ಯರನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದರು.