ಬೆಂಗಳೂರು: ದೇಶದಲ್ಲಿಯೇ ಅತ್ಯುತ್ತಮ ವ್ಯಾಪಾರ ಮಾರುಕಟ್ಟೆ ವಿಸ್ತರಣಾ ಜಾಲಕ್ಕೆ ನೀಡಲಾಗುವ ಪ್ರಶಸ್ತಿಯನ್ನು ಕರ್ನಾಟಕ ಹಾಲು ಮಹಾಮಂಡಳಿಗೆ (ಕೆಎಂಎಫ್) ನೀಡಲಾಗಿದೆ.
ರಾಷ್ಟ್ರೀಯ ಸಹಕಾರಿ ಹೈನುಗಾರಿಕೆ ಮಹಾ ಮಂಡಲದ (ಎನ್ಸಿಡಿಎಫ್ಐ) ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಹಾಲು, ಹಾಲಿನ ಉತ್ಪಾದನೆಗಳ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಕೆಎಂಎಫ್ಗೆ ಈ ಪ್ರಶಸ್ತಿ ನೀಡಲಾಗಿದೆ.
ಎನ್ಸಿಡಿಎಫ್ಐ ಕಳೆದ ಐದು ವರ್ಷದ ಅವಧಿಯಲ್ಲಿ ಸುಮಾರು ₹5 ಸಾವಿರ ಕೋಟಿಗೂ ಅಧಿಕ ವ್ಯವಹಾರಗಳನ್ನು ನಡೆಸಿದೆ. ಇದರಲ್ಲಿ ಈ ಸಂಸ್ಥೆ ಜತೆಗೆ ಕೆಎಂಎಫ್ ಸುಮಾರು ₹2,400 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ನಡೆಸಿದೆ. ಹೀಗಾಗಿ, ಕೆಎಂಎಫ್ನ ನಂದಿನಿ ಬ್ರಾಂಡ್ ಎನ್ಸಿಡಿಎಫ್ಐ ಪ್ರಶಸ್ತಿಗೆ ಪಾತ್ರವಾಗಿದೆ.
ಗುಜರಾತ್ನ ಗಾಂಧಿನಗರದಲ್ಲಿ ಭಾನುವಾರ ನಡೆದ ಎನ್ಸಿಡಿಎಫ್ಐ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಮಿತ್ ಶಾ ಅವರು, ‘ದೇಶದಲ್ಲಿ ಅಮೂಲ್ ಮೊದಲ ಸ್ಥಾನದಲ್ಲಿದೆ. ಕೆಎಂಎಫ್ ಎರಡನೇ ಸ್ಥಾನ ಅಲಂಕರಿಸಿದೆ. ಕರ್ನಾಟಕವಲ್ಲದೇ ನೆರೆಯ ಬಹುತೇಕ ರಾಜ್ಯಗಳಲ್ಲಿಯೂ ‘ನಂದಿನಿ’ ಬ್ರಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪಾದನೆಗಳನ್ನು ರೈತ ಸಮುದಾಯಕ್ಕೆ ನೀಡುತ್ತಿದೆ. ಈ ಮೂಲಕ ಹೈನು ಉದ್ಯಮ ಬೆಳೆಯಲು ಈ ಸಂಸ್ಥೆಯು ಶ್ರಮಿಸುತ್ತಿದೆ. ತಮಿಳುನಾಡಿನಲ್ಲಿ ಸಹ ಸಹಕಾರಿ ಸಂಘಗಳು ಬೆಳೆಯಬೇಕಾಗಿದೆ. ದೇಶದಾದ್ಯಂತ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ’ ಎಂದು ಹೇಳಿದರು.