ಬೆಂಗಳೂರು: ಗ್ರಾಹಕರೊಬ್ಬರು ಅಡವಿಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪದಡಿ ಮಣಪ್ಪುರಂ ಫೈನಾನ್ಸ್ ಕಂಪನಿ ವ್ಯವಸ್ಥಾಪಕ ಸಿದ್ದೇಶ್ ಎಂಬುವರನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ತುಮಕೂರು ಮಧುಗಿರಿಯ ಸಿದ್ದೇಶ್, ನಂದಿನಿ ಲೇಔಟ್ನಲ್ಲಿ ವಾಸವಿದ್ದ. ಮಣಪ್ಪುರಂ ಫೈನಾನ್ಸ್ ಕಂಪನಿಯ ಸ್ಥಳೀಯ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿ ಆಡಳಿತ ಮಂಡಳಿ ನೀಡಿರುವ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಆರೋಪಿ ಸಿದ್ದೇಶ್, ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ. ಇದಕ್ಕಾಗಿ ಹಲವರ ಬಳಿ ಸಾಲ ಮಾಡಿದ್ದ. ಬೆಟ್ಟಿಂಗ್ನಲ್ಲಿ ಸೋತು ಹಣ ಕಳೆದುಕೊಂಡಿದ್ದ. ಸಾಲ ನೀಡಿದ್ದ ಜನ, ವಾಪಸು ನೀಡುವಂತೆ ಒತ್ತಾಯಿಸಲಾರಂಭಿಸಿದ್ದರು. ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಚಿನ್ನಾಭರಣ ಕಳ್ಳತನ ಮಾಡಲು ಆರೋಪಿ ಸಂಚು ರೂಪಿಸಿದ್ದ.’
‘ಗ್ರಾಹಕರೊಬ್ಬರು ಅಡವಿಟ್ಟಿದ್ದ ಚಿನ್ನದ ಸರಗಳನ್ನು ಹಂತ ಹಂತವಾಗಿ ಆರೋಪಿ ಕಳ್ಳತನ ಮಾಡಿದ್ದ. ಇತ್ತೀಚೆಗೆ ಕೆಲಸಕ್ಕೆ ರಜೆ ಹಾಕಿ ನಾಪತ್ತೆಯಾಗಿದ್ದ. ವಾರ್ಷಿಕ ಲೆಕ್ಕಪತ್ರ ತಪಾಸಣೆ ವೇಳೆ ಆರೋಪಿ ಕೃತ್ಯ ಬಯಲಾಗಿತ್ತು. ಆಡಳಿತ ಮಂಡಳಿಯವರು ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.
‘ತಲೆಮರೆಸಿಕೊಂಡಿದ್ದ ಆರೋಪಿಯನ್ನು ದೊಡ್ಡಬಳ್ಳಾಪುರದಲ್ಲಿ ಬಂಧಿಸಲಾಗಿದೆ. ಈತನಿಂದ 40 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.