ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು ಹಾಗೂ ಬೆಲೆ ಏರಿಕೆ ಖಂಡಿಸಿ ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ನಗರದಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದವರನ್ನು ಪೊಲೀಸರು ವಶಕ್ಕೆ ಪಡೆದರು.
ಮೆಜೆಸ್ಟಿಕ್ ಹಾಗೂ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಸೇರಿದ್ದ ಗುಂಪು ಪ್ರತಿಭಟನೆ ಆರಂಭಿಸಿತ್ತು. ಸ್ಥಳದಲ್ಲಿದ್ದ ಪೊಲೀಸರು, 'ಪ್ರತಿಭಟನೆಗೆ ಅನುಮತಿ ಪಡೆದಿಲ್ಲ. ಹೀಗಾಗಿ, ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಕಾನೂನು ಮೀರಿ ನಡೆಯಬೇಡಿ' ಎಂದು ಕೋರಿದರು.
ಅದಕ್ಕೆ ಜಗ್ಗದ ಪ್ರತಿಭಟನಕಾರರು, ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದರು. ಇದೇ ವೇಳೆ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಎಲ್ಲರನ್ನೂ ಬಸ್ಸಿನಲ್ಲಿ ಕರೆದೊಯ್ದರು. ವಶಕ್ಕೆ ಪಡೆಯುತ್ತಿದ್ದ ವೇಳೆಯಲ್ಲೂ ತಳ್ಳಾಟ ನೂಕಾಟ ನಡೆಯಿತು.
ಯಥಾಸ್ಥಿತಿ; ಬಂದ್ ನಡುವೆಯೂ ಬೆಂಗಳೂರಿನಲ್ಲಿ ಯಥಾಸ್ಥಿತಿ ಇದೆ. ಬೆಳಿಗ್ಗೆಯಿಂದ ಹಲವೆಡೆ ಅಂಗಡಿಗಳೂ ತೆರೆದಿವೆ. ಕೆಲವರು ಸ್ವಯಂಪ್ರೇರಿತವಾಗಿ ಅಂಗಡಿ ಬಂದ್ ಮಾಡಿದ್ದಾರೆ.