ಬೆಂಗಳೂರು: ನಗರದಲ್ಲಿ ನಡೆದಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣ ಸಂಬಂಧ ರೌಡಿ ನವೀನ್ನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
‘ಶ್ರೀರಾಮಪುರ ಠಾಣೆಯ ರೌಡಿ ಪಟ್ಟಿಯಲ್ಲಿ ನವೀನ್ ಹೆಸರಿದೆ. ಈತ, ಇನ್ನೊಬ್ಬ ಆರೋಪಿ ಬೇಲೂರಿನ ಪ್ರಭು ಎಂಬಾತನ ಜೊತೆ ಸೇರಿ ಕೃತ್ಯ ಎಸಗುತ್ತಿದ್ದ. ಆರೋಪಿಯಿಂದ ₹ 4.40 ಲಕ್ಷ ಮೌಲ್ಯದ ಮೂರು ರಾಯಲ್ ಎನ್ಫೀಲ್ಡ್ ಸೇರಿದಂತೆ 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನವೀನ್ ಹಾಗೂ ಪ್ರಭು, ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಹೋಗಿದ್ದರು. ಅಲ್ಲಿಯೇ ಅವರಿಬ್ಬರ ನಡುವೆ ಸ್ನೇಹ ಏರ್ಪಟ್ಟಿತ್ತು. ಒಟ್ಟಿಗೆ ಅಪರಾಧ ಕೃತ್ಯ ಎಸಗಲು ಅವರಿಬ್ಬರು ಜೈಲಿನಲ್ಲೇ ಮಾತನಾಡಿಕೊಂಡಿದ್ದರು.’
‘ಜಾಮೀನು ಮೇಲೆ ಅವರಿಬ್ಬರು ಹೊರಗೆ ಬಂದಿದ್ದರು. ರಾಯಲ್ ಎನ್ಫೀಲ್ಡ್ ಹಾಗೂ ಇತರೆ ದ್ವಿಚಕ್ರ ವಾಹನಗಳ ಲಾಕ್ ಮುರಿಯುವಲ್ಲಿ ಪ್ರಭು ಪರಿಣಿತನಾಗಿದ್ದ. ನಗರದಲ್ಲಿ ಸುತ್ತಾಡಿ ವಾಹನಗಳನ್ನು ಕದ್ದು, ನವೀನ್ಗೆ ತಂದು ಕೊಡುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.
‘ಕದ್ದ ವಾಹನಗಳ ವಿಲೇವಾರಿಯನ್ನು ನವೀನ್ ಮಾಡುತ್ತಿದ್ದ. ಅದರಿಂದ ಬಂದ ಹಣವನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು. ಸದ್ಯ ಪ್ರಭು ತಲೆಮರೆಸಿಕೊಂಡಿದ್ದಾನೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.
ಬೌನ್ಸ್ ವಾಹನ ಕದ್ದಿದ್ದ: ‘ಬೌನ್ಸ್ ಕಂಪನಿ ದ್ವಿಚಕ್ರ ವಾಹನವನ್ನೂ ಆರೋಪಿ ಕದ್ದಿದ್ದ’ ಎಂದು ಪೊಲಿಸರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.