ಬೆಂಗಳೂರು: ರಾಜ್ಯದಲ್ಲಿ 25 ಲಕ್ಷ ಮಂದಿ ಕುಂಚಿಟಿಗ ಸಮುದಾಯಕ್ಕೆ ಸೇರಿದ್ದಾರೆ. ಸಮುದಾಯದ ಅಭಿವೃದ್ಧಿಗಾಗಿ ಕುಂಚಿಟಿಗರನ್ನು 'ಇತರೆ ಹಿಂದುಳಿದ ವರ್ಗಗಳ' (ಒಬಿಸಿ) ಪಟ್ಟಿಗೆ ಸೇರಿಸಬೇಕು' ಎಂದು ಸಮುದಾಯದ ಮುಖಂಡ ಮುರಳೀಧರ ಹಾಲಪ್ಪ ಒತ್ತಾಯಿಸಿದರು.
ವಿಶ್ವ ಕುಂಚಿಟಿಗರ ಪರಿಷತ್ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿ.ಅಂಜನಪ್ಪ ಅವರು ರಚಿಸಿರುವ 'ಕುಂಚಿಟಿಗ ಇತಿಹಾಸ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಕುಂಚಿಟಿಗರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ನಿವೇಶನ ಒದಗಿಸಬೇಕು. ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದಲ್ಲಿ ಕುಂಚಿಟಿಗ ಸಮುದಾಯದ 28 ಸಾವಿರ ಮಂದಿ ಇದ್ದಾರೆ. ಪಾಲಿಕೆ ಚುನಾವಣೆಗಳಲ್ಲಿ ಸಮುದಾಯಕ್ಕಾಗಿ ಮೂರು ವಾರ್ಡ್ಗಳನ್ನು ಮೀಸಲಿಡಬೇಕು' ಎಂದು ಮನವಿ ಮಾಡಿದರು.
ಸಂಸದ ಡಿ.ಕೆ.ಸುರೇಶ್, 'ಕುಂಚಿಟಿಗ ಸಮುದಾಯದೊಂದಿಗೆ ಸದಾ ಇರುತ್ತೇವೆ. ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್.ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು' ಎಂದರು.
ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್,'ಕುಂಚಿಟಿಗ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಲು ಸಂಸತ್ನಲ್ಲಿ ಮೊಟ್ಟಮೊದಲ ಬಾರಿಗೆ ದನಿ ಎತ್ತಿದ್ದೆ. ಮುಂದಿನ ಅಧಿವೇಶನದಲ್ಲಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆ' ಎಂದರು.