ಬೆಂಗಳೂರು: ‘ನೋಟಿನ ರಾಜಕೀಯಕ್ಕಾಗಿ ರೈತ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ತಂದಿರುವ ಬಿಜೆಪಿಗೆ ಉಪಚುನಾವಣೆಯಲ್ಲಿ ವೋಟಿನ ರಾಜಕೀಯದ ಮೂಲಕ ತಕ್ಕ ಪಾಠ ಕಲಿಸಬೇಕು’ ಎಂದು ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ವೇದಿಕೆ ಮನವಿ ಮಾಡಿದೆ.
ಕೋವಿಡ್ನಿಂದ ಇತ್ತೀಚೆಗೆ ನಿಧನರಾದ ರೈತ ಮುಖಂಡ ಮಾರುತಿ ಮಾನ್ಪಡೆ ಅವರಿಗೆ ಗಾಂಧಿ ಭವನದಲ್ಲಿ ಮಂಗಳ ವಾರ ನಡೆದ ಶ್ರದ್ಧಾಂಜಲಿ ಸಭೆಯ ಬಳಿಕ ಐಕ್ಯ ಹೋರಾಟ ಸಮಿತಿಯ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ವೇದಿಕೆಯ ತೀರ್ಮಾನವನ್ನು ಪ್ರಕಟಿಸಿದರು.
‘ಉಪಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳ ಮತದಾರರನ್ನು ಜಾಗೃತಗೊಳಿಸಲು ಐಕ್ಯ ಹೋರಾಟ ವೇದಿ ಕೆಯ ಸಾಮಾಜಿಕ ಜಾಲ ತಂಡ ಈಗಾಗಲೇ ಕಾರ್ಯನಿರತವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಸಭೆ, ಮೆರವಣಿಗೆಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾರರಿಗೆ ಈ ಸುಗ್ರೀವಾಜ್ಞೆಗಳ ಪರಿಣಾಮವನ್ನು ಮನವರಿಕೆ ಮಾಡಿಕೊಡಲಾಗುವುದು’ ಎಂದೂ ಮುಖಂಡರು ತಿಳಿಸಿದರು.
ಇದೇ ವೇಳೆ,ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳಿಗೆ ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡ ಬಾರದು ಸೇರಿದಂತೆ 10 ಹಕ್ಕೊತ್ತಾಯಗಳ ಕರಪತ್ರವನ್ನೂ ಪ್ರಕಟಿಸಲಾಯಿತು.