ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಹೆಗಡೆ ಕಾರು ಡಿಕ್ಕಿ : ಸ್ಥಳದಿಂದ ಪರಾರಿ, ಸ್ಥಳೀಯರ ಆಕ್ರೋಶ

Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 207ರ ದೊರೆಕಾವಲ್‌ ಗೇಟ್‌ ಬಳಿ ಭಾನುವಾರ ಸಂಜೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಕಾರು ಸೇರಿದಂತೆ ನಾಲ್ಕು ವಾಹನಗಳ ಸರಣಿ ಡಿಕ್ಕಿಯಾಗಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಹೆಗಡೆ, ದೊಡ್ಡಬಳ್ಳಾಪುರದಿಂದ ಪೊಲೀಸ್ ಬೆಂಗಾವಲಿನಲ್ಲಿ ದೇವನಹಳ್ಳಿ ವಿಮಾನನಿಲ್ದಾಣದ ಕಡೆ ತೆರಳುತ್ತಿದ್ದರು. ವೇಗವಾಗಿ ತೆರಳುತ್ತಿದ್ದ ಸಚಿವರ ಇನೋವಾ ಕಾರು ಮುಂದೆ ಚಲಿಸುತ್ತಿದ್ದ ಖಾಸಗಿ ಇನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಪೊಲೀಸ್‌ ಬೆಂಗಾವಲಿನ ವಾಹನವು ರಸ್ತೆಯಲ್ಲಿದ್ದ ಗುಂಡಿ ಮತ್ತು ರಸ್ತೆ ಮಧ್ಯೆ ಹಾದು ಹೋಗುತ್ತಿದ್ದ ಕೋತಿಗಳನ್ನು ಅಪಾಯದಿಂದ ತಪ್ಪಿಸಲು ಹೋದಾಗ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದರು.

ಸಚಿವರ ವಾಹನದ ಹಿಂದೆ ಬರುತ್ತಿದ್ದ ಪೊಲೀಸ್‌ ಬೆಂಗಾವಲು ವಾಹನ ತಕ್ಷಣ ಬ್ರೇಕ್‌ ಹಾಕಿದ್ದರಿಂದ ಅದರ ಹಿಂಬದಿ ಬರುತ್ತಿದ್ದ ಬೈಕ್‌ ಮತ್ತು ಇನೋವಾ ಸವಾರರಿಗೆ ಗಾಯವಾಗಿದೆ. ಸರಣಿ ಅಪಘಾತವಾದರೂ ಸಚಿವರು ಸ್ಥಳದಲ್ಲಿ ವಾಹನ ನಿಲ್ಲಿಸದೆ ತೆರಳಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಇನೋವಾ ಮಾಲೀಕ ಚಿಕ್ಕಬಳ್ಳಾಪುರ ಬಾಬು ಮಾತನಾಡಿ, ‘ನನ್ನ ಪತ್ನಿ ರಾಣಿಯ ಹಲ್ಲು ಮುರಿದು ತೀವ್ರ ರಕ್ತಸ್ರಾವವಾಗಿದೆ. ಮಗಳು ಪ್ರಿನ್ಸಿ ಜೋಸ್ನಾ, ಮಗ ನಿವೀಲ್‌ ಆಂಟೋನಿಗೆ ಗಾಯವಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ’ ಎಂದರು. ದ್ವಿಚಕ್ರ ವಾಹನ ಸವಾರ ಅಂಬರೀಷ್‌ ಕೈಗೆ ಗಾಯವಾಗಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಚಿಕ್ಕಬಳ್ಳಾಪುರ ಬಾಬು ವಿರುದ್ಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT