ಬೆಂಗಳೂರು: ಮೈಸೂರು ರಸ್ತೆ ಮತ್ತು ಕೆಂಗೇರಿ ನಡುವಿನ ಮೆಟ್ರೊ ರೈಲು ಮಾರ್ಗದಲ್ಲಿ(ನೇರಳೆ ಮಾರ್ಗ) ಕಾಣಿಸಿಕೊಂಡಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ರೈಲುಗಳ ಸಂಚಾರ ಸಹಜ ಸ್ಥಿತಿಗೆ ಮರಳಿದೆ.
ಬೆಳಿಗ್ಗೆಯಿಂದ ಒಂದೇ ಟ್ರ್ಯಾಕ್ ನಲ್ಲಿ 25 ರಿಂದ 30 ನಿಮಿಷಕ್ಕೊ ಒಂದರಂತೆ ರೈಲುಗಳು ಸಂಚರಿಸಿದ್ದವು. ನಿರ್ವಹಣಾ ತಂಡದ ಸಿಬ್ಬಂದಿ ತಾಂತ್ರಿಕ ದೋಷ ಪತ್ತೆಮಾಡಿ ಸರಿಪಡಿಸುವಲ್ಲಿ ಯಶಸ್ವಿಯಾಗಿದೆ. ಮಧ್ಯಾಹ್ನ 12 ಗಂಟೆ ನಂತರ ರೈಲುಗಳು ವೇಳಾಪಟ್ಟಿ ಪ್ರಕಾರ ಸಂಚರಿಸುತ್ತಿವೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಸಂಚಾರದಲ್ಲಿ ವ್ಯತ್ಯಯ ಆಗಿದ್ದರಿಂದ ಮೈಸೂರು ರಸ್ತೆಯಿಂದ ಕೆಂಗೇರಿ ತನಕದ ನಿಲ್ದಾಣಗಳಲ್ಲಿ ಪ್ರಯಾಣಿಕರು ರೈಲಿಗಾಗಿ ಅರ್ಧಗಂಟೆ ತನಕ ಕಾಯಬೇಕಾದ ಸ್ಥಿತಿ ಇತ್ತು. ಸಮಯಕ್ಕೆ ಸರಿಯಾಗಿ ಗುರಿ ತಲುಪಲು ಸಾಧ್ಯವಾಗದೆ ಪರದಾಡಿದರು.