ಸೇನಾ ಸಿಬ್ಬಂದಿ ಗಸ್ತು: ಕಾಮಗಾರಿ ಮುಂದುವರಿಸದಂತೆ ಸೇನೆ ಬಿಎಂಆರ್ಸಿಎಲ್ ಸೂಚನೆ ನೀಡಿದೆ. ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಸೇನೆಯ ಸಶಸ್ತ್ರ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ‘ನಿಲ್ದಾಣ ನಿರ್ಮಾಣಕ್ಕಾಗಿ ಫಾತಿಮಾ ಬೇಕರಿ, ಟಾಮ್ಸ್ ರೆಸ್ಟೋರೆಂಟ್, ಬಿಪಿಸಿಎಲ್ ಪೆಟ್ರೋಲ್ ಬಂಕ್ ಹಾಗೂ ಶೂಲೆ ವೃತ್ತದಲ್ಲಿನ ಒಂದೆರಡು ಕಟ್ಟಡಗಳನ್ನು ನೆಲಸಮಗೊಳಿಸಿ, ಬ್ಯಾರಿಕೇಡ್ ಹಾಕಲಾಗಿದೆ. ಅಷ್ಟರಲ್ಲಿ, ಕಾನೂನಾತ್ಮಕ ತೊಡಕು ಎದುರಾಗಿದ್ದರಿಂದಾಗಿ ರಕ್ಷಣಾ ಇಲಾಖೆಯ ಕೆ ಆ್ಯಂಡ್ ಕೆ (ಕರ್ನಾಟಕ ಮತ್ತು ಕೇರಳ) ಸಬ್ ಕಮಾಂಡ್ ಕಚೇರಿಯು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಹೇಳಿದೆ. ಸೇನಾ ಸಿಬ್ಬಂದಿಯೂ ಇಲ್ಲಿ ಗಸ್ತು ತಿರುಗುತ್ತಿದ್ದಾರೆ. ಹಾಗಾಗಿ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಳಿಸಿದ್ದೇವೆ’ ಎಂದು ನಿಗಮದ ಅಧಿಕಾರಿ ಹೇಳಿದರು.