ಬೆಂಗಳೂರು: ‘ಜಗತ್ತಿನಲ್ಲಿ ದತ್ತಾಂಶವಿಲ್ಲದೆ ವ್ಯವಸ್ಥೆಯ ಚಾಲನೆ ಮತ್ತು ಆಡಳಿತ ಕಲ್ಪಿಸಿಕೊಳ್ಳುವುದು ಕಷ್ಟ’ ಎಂದು ಭಾರತೀಯ ವಾಯುಪಡೆ ಸಾಫ್ಟ್ವೇರ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ನ ಕಮಾಂಡೆಂಟ್ ಡಾ.ದೇವೇಶ್ ವತ್ಸ ಅವರು ಹೇಳಿದರು.
ಬಿಎಂಎಸ್ ಎಜುಕೇಷನ್ ಟ್ರಸ್ಟ್ನ ಬಿಎಂಎಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಬಿ.ಎಸ್.ನಾರಾಯಣ ಉತ್ಕೃಷ್ಟ ಕೇಂದ್ರ (ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆ) ಉದ್ಘಾಟಿಸಿ ಅವರು ಮಾತನಾಡಿದರು.
‘ಹೊಸ ವಿಭಾಗವು ಮಹತ್ವದ ಪಾತ್ರ ನಿರ್ವಹಿಸಲಿದೆ. ಸುಧಾರಿತ ತಾಂತ್ರಿಕ ಸೌಕರ್ಯದ ಜತೆಗೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಭಾಗ ಸ್ಥಾಪಿಸಲಾಗಿದೆ. ಯಶಸ್ವಿ ವೃತ್ತಿಜೀವನ ಕಂಡುಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಈ ವಿಭಾಗವು ಅಗತ್ಯತೆ ಪೂರೈಸಲಿದೆ’ ಎಂದು ಹೇಳಿದರು.
ಬಿಎಂಎಸ್ನ ಟ್ರಸ್ಟಿ ಅವಿರಾಮ್ ಶರ್ಮಾ ಮಾತನಾಡಿ, ‘ಸಂಸ್ಥೆಯಲ್ಲಿ ರಾಜ್ಯದ ಮೊದಲ ಉತ್ಕೃಷ್ಟ ಕೇಂದ್ರ ಸ್ಥಾಪನೆ ಮಾಡಿರುವುದು ಹೆಮ್ಮೆ ತಂದಿದೆ’ ಎಂದು ಹೇಳಿದರು.
‘ಈ ಎರಡು ವಿಭಾಗಗಳು ಭವಿಷ್ಯದ ಅಗತ್ಯಗಳಿಗೆ ಡಿಜಿಟಲ್ ದತ್ತಾಂಶ ಬಳಸುವ ಸಮುದಾಯವನ್ನು ನಿರ್ಮಿಸುವ ವ್ಯವಸ್ಥೆ ರೂಪಿಸಲು ಬೇಕಾದ ವಾತಾವರಣ ಕಲ್ಪಿಸುತ್ತವೆ. ವಿದ್ಯಾರ್ಥಿಗಳ ಜ್ಞಾನ ಹೆಚ್ಚಳಕ್ಕೂ ಸಹಾಯವಾಗಲಿದೆ’ ಎಂದು ಪ್ರತಿಪಾದಿಸಿದರು.
ಕಾಂಚೀಪುರಂ ಐಐಐಟಿಡಿಎಂ ಆಡಳಿತ ಮಂಡಳಿ ಮುಖ್ಯಸ್ಥ ಪ್ರೊ.ಎಸ್. ಸಡಗೋಪನ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಲ್ಲಿ ಯಶಸ್ವಿ ಮತ್ತು ಪ್ರಭಾವಶಾಲಿ ವೃತ್ತಿಜೀವನವನ್ನು ನಿರ್ಮಿಸುವ ಉದ್ದೇಶದಿಂದ ವಿಭಾಗ ಸ್ಥಾಪಿಸಲಾಗಿದೆ’ ಎಂದರು.
ಗುವಾಹಟಿ ಐಐಟಿ ಸಿಎಸ್ಇ ವಿಭಾಗದ ಪ್ರೊ.ಪ್ರದೀಪ್ ಕೆ. ದಾಸ್ ಮಾತನಾಡಿ, ‘ನಮ್ಮ ಸುತ್ತಲೂ ಲಭ್ಯವಿರುವ ಅಸಂಖ್ಯಾತ ದತ್ತಾಂಶಗಳ ಸೂಕ್ತ ಬಳಕೆ ಅಗತ್ಯ. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಲ್ಲಿ ಸಮರ್ಪಕ ತರಬೇತಿ ಅಗತ್ಯ’ ಎಂದು ಹೇಳಿದರು.
ಬಿಎಂಎಸ್ ಎಜುಕೇಶನ್ ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಡಾ.ಬಿ.ಎಸ್.ರಾಗಿಣಿ ನಾರಾಯಣ್, ಬಿಎಂಸಿಎಸ್ಇ ಮುಖ್ಯಸ್ಥ ಡಾ.ಪಿ. ದಯಾನಂದ ಪೈ, ಗೌತಮ್ ವಿ. ಕಳತ್ತೂರ್ ಉಪಸ್ಥಿತರಿದ್ದರು.