ಉಡುಪಿ: ‘ಪ್ರಕೃತಿ ಜತೆ ಮನುಷ್ಯ ಸಂಘರ್ಷಕ್ಕಿಳಿದಿರುವ ಪರಿಣಾಮ ಭೂಕಂಪ, ಸುನಾಮಿಯಂತಹ ನೈಸ ರ್ಗಿಕ ವಿಕೋಪಗಳು ಎದುರಾ ಗುತ್ತಿವೆ’ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ವಾಯು ಗುಣಮಟ್ಟದ ಮಾಪನ ಕೇಂದ್ರ’ವನ್ನು ಉದ್ಘಾಟಿಸಿ ಮಾತನಾಡಿದರು.
ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸ ಬೇಕಾದ ಮನುಷ್ಯ ಅವುಗಳೊಂದಿಗೆ ಸಂಘರ್ಷಕ್ಕಿದಂತೆ ನಿರಂತರ ದಾಳಿ ಮಾಡುತ್ತಿದ್ದಾನೆ. ಇದರಿಂದ ಗಿಡ–ಮರ, ಗಾಳಿ ನೀರು ಹಾಗೂ ಶಬ್ದ ಮಾಲಿನ್ಯ ದಿನೇ ದಿನೆ ಹೆಚ್ಚಾಗುತ್ತಿದೆ. ಮನುಷ್ಯ ಮತ್ತು ಪರಿಸರ ನಡುವೆ ಉತ್ತಮ ಬಾಂಧವ್ಯ ಇದ್ದಾಗ ಮಾತ್ರ ಸಂತಸದ ಬದುಕು ಸಾಗಿಸಲು ಸಾಧ್ಯ ಎಂದು ಹೇಳಿದರು.
ಪರಿಸರ ಸಂರಕ್ಷಣೆಯಲ್ಲಿ ಭೂತಾನ್ ವಿಶ್ವಕ್ಕೆ ಮಾದರಿಯಾಗಿದ್ದು, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೊಂದಿದೆ. ಶೇ 70ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಮೀನುಗಾರಿಕೆ, ಮರುಳುಗಾರಿಕೆ, ಮರಗಳ ಹನನಕ್ಕೆ ನಿಷೇಧ ಹೇರುವ ಮೂಲಕ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ನಗರದ ಮಧ್ಯ ಭಾಗದಲ್ಲಿ ವಾಯು ಗುಣಮಟ್ಟ ಮಾಪನ ಕೇಂದ್ರವನ್ನು ಸ್ಥಾಪಿಸುವ ಮೂಲಕ ಜನರಿಗೆ ವಾಯು ಮಾಲಿನ್ಯದ ಕುರಿತು ಅರಿವು ಮೂಡಿಸಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಜಯಪ್ರಕಾಶ ನಾಯಾಕ್, ಕೇಂದ್ರ ಕಚೇರಿಯ ಡಾ. ನಾಗಪ್ಪ ಉಪಸ್ಥಿತರಿದ್ದರು. ಪರಿಸರ ಅಧಿಕಾರಿ ಡಾ. ಎಚ್ ಲಕ್ಷ್ಮೀಕಾಂತ ಸ್ವಾಗತಿಸಿದರು. ಸಹಾಯಕ ಪರಿಸರ ಅಧಿಕಾರಿ ಪ್ರಮೀಳಾ ವಂದಿಸಿದರು. ಡಾ. ಅಡ್ವೆ ರವೀಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದಲ್ಲಿ 29ಕೇಂದ್ರ ನಿರ್ಮಾಣ: ಆರೋಗ್ಯಕರ ಬದುಕಿಗೆ ಶುದ್ಧ ಗಾಳಿ ಬಹಳ ಮುಖ್ಯ. ನಗರೀಕರಣ, ವಾಹನಗಳ ದಟ್ಟಣೆ, ಆಧುನೀಕರಣದ ಭರಾಟೆಯಲ್ಲಿ ಗಾಳಿ ಅಶುದ್ಧಗೊಳ್ಳುತ್ತಿದೆ. ಹೆಚ್ಚಾಗುತ್ತಿರುವ ವಾಯುಮಾಲಿನ್ಯದ ಮಟ್ಟವನ್ನು ನಿಖರವಾಗಿ ತಿಳಿಯಲು ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ನಿರಂತರ ಪರಿವೇಷ್ಟಕ ವಾಯು ಮಾಪನ ಕೇಂದ್ರವನ್ನು ಸುಮಾರು ₹1.36ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಇಂತಹ 29 ಕೇಂದ್ರ ಸ್ಥಾಪಿಸಲಾಗಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.