ಬೆಂಗಳೂರು:ಮಹದೇವಪುರದಲ್ಲಿ ಬೈಕ್ ಸವಾರರೊಬ್ಬರ ಮೇಲೆ ಬಿಎಂಟಿಸಿ ಚಾಲಕ ಸಂತೋಷ್ ಬಡಿಗೇರ್ ಎಂಬುವವರು ಗುರುವಾರ ಹಲ್ಲೆ ನಡೆಸಿದ್ದಾರೆ. ಹೆಬ್ಬಾಳ ಡಿಪೋಗೆ ಸೇರಿದ ಸಂತೋಷ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಬಿಎಂಟಿಸಿ ಆದೇಶಿಸಿದೆ.
ಮಹದೇವಪುರದಲ್ಲಿ ನಡೆದ ಘಟನೆಯನ್ನು ಚಿತ್ರಿಕರಿಸಿರುವ ಹಮೀದ್ ಎಂಬುವವರು ಈ ವಿಡಿಯೋ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
‘ಇಂದು ಬೆಳಗ್ಗೆ ಕಚೇರಿಗೆ ತೆರಳುವ ದಾರಿಯಲ್ಲಿ ಈ ಭಯಾನಕ ಘಟನೆ ಸಂಭವಿಸಿದೆ. ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ನಾಗರಿಕರನ್ನು ಸಾರ್ವಜನಿಕವಾಗಿ ಥಳಿಸುವ ಹಕ್ಕು ಬಿಎಂಟಿಸಿ ಸಿಬ್ಬಂದಿಗೆ ಇದೆಯೇ?’ ಎಂದು ಟ್ವಿಟ್ ಮಾಡಿದ್ದರು.
This horrible incident happened today morning on my way to office dis morning.. Does BMTC personnel have the rights to take law into their hands and beat up a private citizen in public? pic.twitter.com/8Y3fQD9QF6
ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಬಿಎಂಟಿಸಿ, ಬೆಂಗಳೂರು ಪೊಲೀಸ್ ಸೇರಿದಂತೆ ಹಲವು ಖಾಸಗಿ ಮಾಧ್ಯಮಗಳ ಟ್ವಿಟರ್ ಖಾತೆಗಳಿಗೆ ಟ್ಯಾಗ್ ಮಾಡಿರುವ ಹಮಿದ್ ಅವರು, ‘ನಮಗೆ ಸುರಕ್ಷಿತ ಬೆಂಗಳೂರು ರಸ್ತೆಗಳು ಬೇಕು. ದಯವಿಟ್ಟು ಈ ಘಟನೆಯನ್ನು ನೋಡಿ ಮತ್ತು ಅಗತ್ಯ ಕ್ರಮಗಳ ಬಗ್ಗೆ ಯೋಚಿಸಿ’ ಎಂದಿದ್ದರು.
ಹಮಿದ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಬಿಎಂಟಿಸಿ ‘ಚಾಲಕ ಸಂತೋಷ್ ಬಡಿಗೇರ್ ಅವರ ವರ್ತನೆಯನ್ನು ತಮ್ಮ ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ. ಅವರನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸಲಾಗಿದ್ದು, ಮುಂದೆ ವಿಚಾರಣೆ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದೆ.
BMTC has viewed the misbehaviour of Driver Santosh badiger of depot 28 seriously and suspended him with immediate effect,pending enquiry.