ಬೆಂಗಳೂರು: ‘ನಗರದ ನ್ಯಾಯಾಲಯದಲ್ಲಿ ಬಾಂಬ್ ಇರಿಸಿದ್ದೇನೆ’ ಎಂಬುದಾಗಿ ಬೆದರಿಕೆಯೊಡ್ಡಿದ್ದ ಆರೋಪಿ ಸುನೀಲ್ಕುಮಾರ್ (40) ಎಂಬುವವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಕೇರಳದ ಸುನೀಲ್ ಕುಮಾರ್, ಕಾಡುಗೋಡಿಯಲ್ಲಿ ವಾಸವಿದ್ದ. ಜ. 3ರಂದು ಬೆಳಿಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಈತ, ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಬಾಂಬ್ ಇರಿಸಿರುವುದಾಗಿ ಹೇಳಿದ್ದ. ನಂತರ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬೆದರಿಕೆ ಬಗ್ಗೆ ನಿಯಂತ್ರಣ ಕೊಠಡಿ ಸಿಬ್ಬಂದಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಶ್ವಾನ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ನ್ಯಾಯಾಲಯದಲ್ಲಿ ತೀವ್ರ ಶೋಧ ನಡೆಸಿದ್ದರು. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಹುಸಿ ಬೆದರಿಕೆ ಕರೆಯೆಂದು ಘೋಷಿಸಿದ್ದರು.’
‘ಆರೋಪಿ ವಿರುದ್ಧ ಪ್ರಕರಣ ದಾಲಿಸಿಕೊಳ್ಳಲಾಗಿತ್ತು. ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಆಕ್ರೋಶಗೊಂಡು ಕರೆ: ‘ಸುನೀಲ್ ಕುಮಾರ್ ಪತ್ನಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ವರದಕ್ಷಿಣೆ ಕಿರುಕುಳ ಆರೋಪದಡಿ ಸುನೀಲ್ ಕುಮಾರ್ ವಿರುದ್ಧ ಪ್ರಕರಣ ದಾಖಲಾ ಗಿತ್ತು. ಇದೇ ಪ್ರಕರಣದ ವಿಚಾರಣೆಗೆಂದು ಆರೋಪಿ, ನ್ಯಾಯಾಲಯಕ್ಕೆ ಆಗಾಗ ಹಾಜರಾಗುತ್ತಿದ್ದ’. ‘ಹಲವು ಬಾರಿ ವಿಚಾರಣೆ ನಡೆದಿತ್ತು. ಜ. 3ರಂದು ಸಹ ವಿಚಾರಣೆಗೆ ಬಂದಿದ್ದ. ಇದೇ ಸಂದರ್ಭದಲ್ಲೇ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ. ‘ನ್ಯಾಯಾಲಯಕ್ಕೆ ಅಲೆದಾಡಿ ಸಾಕಾಗಿತ್ತು. ಆಕ್ರೋಶ ಗೊಂಡು ಕರೆ ಮಾಡಿದೆ’ ಎಂಬುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.