ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆ ಬದಲಾಗಿದ್ದು, ಪಾಕಿಸ್ತಾನ ಕೇಂದ್ರಿತವಾಗುತ್ತಿದೆ. ರಾಷ್ಟ್ರೀಯತೆಯ ಬಗ್ಗೆ ಮಾತನಾಡುವ ಕೆಲವರು ಎಲ್ಲ ವಿಚಾರಕ್ಕೂ ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಿದ್ದಾರೆ’ ಎಂದುಲೇಖಕ ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
ನವಕರ್ನಾಟಕ ಪ್ರಕಾಶನ, ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ ಮತ್ತು ಎಂ.ಎಸ್. ಕೃಷ್ಣ ಸ್ಮರಣ ಸಂಸ್ಥೆ ಆನ್ಲೈನ್ ವೇದಿಕೆಯಲ್ಲಿ ಜಂಟಿಯಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬಿ.ಆರ್. ಮಂಜುನಾಥ್ ಅವರ ‘ವಿದ್ಯಾಸಾಗರರ ಮುಗಿಯದ ನಡಿಗೆ’ ಕೃತಿ ಬಿಡುಗಡೆ ಮಾಡಿ, ಮಾತನಾಡಿದರು.
‘ಒಂದು ಕಾಲದಲ್ಲಿ ಭಾರತವನ್ನು ಕಟ್ಟಿ, ಜನಪರವಾಗಿದ್ದ ಸಂಸ್ಥೆಗಳೇ ಈಗ ಜನ ವಿರೋಧಿ ಆಗುತ್ತಿವೆ. ರಾಮಕೃಷ್ಣ ಪರಮಹಂಸ ಅವರು ಕಟ್ಟಿದ ಸಂಸ್ಥೆಗಳು ಈಗ ಮತ್ತೆ ಸಂಪ್ರದಾಯ ವಾದಿಗಳಾಗುತ್ತಿವೆ. ಈಶ್ವರಚಂದ್ರ ವಿದ್ಯಾಸಾಗರ ಅವರು ಸಂಸ್ಥೆಗಳನ್ನು ಕಟ್ಟುವ ಬದಲು ಶಾಲೆಗಳನ್ನು ಪ್ರಾರಂಭಿಸಿದರು. ಇದರಿಂದ ಸಮಾಜದಲ್ಲಿ ಸುಧಾರಣೆ ಕಾಣಲು ಸಾಧ್ಯವಾಯಿತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರ.
‘ವಿದ್ಯಾಸಾಗರ ಅವರು ಬಾಲ್ಯವಿವಾಹ, ಬಹುಪತ್ನಿತ್ವ ಸೇರಿದಂತೆ ವಿವಿಧ ಅನಿಷ್ಠ ಪದ್ಧತಿಗಳನ್ನು ಬುಡಸಮೇತ ತೆಗೆದುಹಾಕಲು ಶ್ರಮಿಸಿದರು. 19ನೇ ಶತಮಾನದಇಲ್ಲಿನ ಬರಹಗಾರರೂ ಅದೇ ಹಾದಿಯಲ್ಲಿ ಸಾಗಿದರು.ಬಂಗಾಳ ಮತ್ತು ಕರ್ನಾಟಕದ ಮಣ್ಣಿನ ಸಂಬಂಧ ಸುದೀರ್ಘ ಮತ್ತು ನಿರ್ಣಾಯಕ ವಾದದ್ದಾಗಿದೆ’ ಎಂದು ಹೇಳಿದರು.
ಕೃತಿಯ ಬಗ್ಗೆ ಮಾತನಾಡಿದ ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ, ‘ಈಶ್ವರಚಂದ್ರ ವಿದ್ಯಾಸಾಗರ ಅವರ ಬಗ್ಗೆಶಾಲಾ ಪಠ್ಯದಲ್ಲಿ ಹೆಚ್ಚಿನ ಉಲ್ಲೇಖಗಳು ಕಾಣಸಿಗುವುದಿಲ್ಲ. ಇದರಿಂದಾಗಿ ಅವರ ಬಗ್ಗೆ ಓದಿರುವುದು ನೆನಪಿನಲ್ಲಿರುವುದು ಕಡಿಮೆ.ಅವರ ಸಾಮಾಜಿಕ ನಿಲುವು ಮತ್ತು ಸಹಾಯ ಹಸ್ತದ ಗುಣವನ್ನು ಪಾಲಿಸಿಕೊಂಡು ಸಾಗಬೇಕಾಗಿದೆ. ಈಶ್ವರಚಂದ್ರ ಅವರು ಈ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರು ಮಹಿಳೆಯರ ಸಮಸ್ಯೆಗಳ ಬಗ್ಗೆ ಸ್ಪಂದಿಸಿದ ಬಗೆ ಹಾಗೂ ಕೈಗೊಂಡ ಕಾರ್ಯಗಳು ಸದಾ ನೆನಪಿನಲ್ಲಿ ಇರುತ್ತವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.