ಬೆಂಗಳೂರು: ಅದ್ದೂರಿ ವಿಡಿಯೋ ಟ್ರೈಲರ್, ಅದರಲ್ಲಿ ಕೃತಿ, ಲೇಖಕರ ಪರಿಚಯ, ಬಳಿಕ ಆಯಾ ಪುಸ್ತಕದ ಬಿಡುಗಡೆ... ಕನ್ನಡ ಪುಸ್ತಕ ಕ್ಷೇತ್ರದಲ್ಲಿ ಹೀಗೊಂದು ಭಿನ್ನ ಮಾದರಿಯ ಬಿಡುಗಡೆ ನಗರದ ಲಾ ಮಾರ್ವೆಲ್ಲಾ ಹೋಟೆಲ್ನಲ್ಲಿಬುಧವಾರ ನಡೆಯಿತು.
ಕನ್ನಡ ಪುಸ್ತಕಲೋಕಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡಲು ‘ವೀರಲೋಕ ಬುಕ್ಸ್’ ಮುಂದಾಗಿದೆ.
ಉದ್ಯಮ ಹೇಗೆ?: ಈ ಉದ್ಯಮ ಮಾದ ರಿಯ ವಿವರ ನೀಡಿದ ವೀರ ಲೋಕದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್, ‘ಕನ್ನಡ ಪುಸ್ತಕ ಎಲ್ಲಿ ಬೇಕಾದರೂ ಸಿಗುವಂತಾಗಲು ಮೊದಲ ಹಂತದಲ್ಲಿ 1 ಸಾವಿರ ಪುಸ್ತಕಗಳ ಸ್ಟ್ಯಾಂಡ್ಗಳನ್ನು ಬೆಂಗಳೂರಿನ ಮಾಲ್, ಅಂಗಡಿ ಮಳಿಗೆ ಗಳಲ್ಲಿ ಇರಿಸಲಾಗುವುದು. ಸ್ಥಳದಲ್ಲೇ ಖರೀದಿಗೆ ಅವಕಾಶ ಇದೆ’ ಎಂದರು.
‘ಕನ್ನಡ ಪುಸ್ತಕಗಳನ್ನು ಪರಿಚಯಿಸಿ ಮಾರಾಟ ಮಾಡಲು ಕಾಲ್ ಸೆಂಟರ್ ಸ್ಥಾಪಿಸಲಾಗಿದೆ. ನಮ್ಮ ಬಳಿ 11 ಲಕ್ಷ ಓದುಗರ ಮಾಹಿತಿ ಇದೆ. ಅವರನ್ನು ಸಂಪರ್ಕಿಸಿ ಪುಸ್ತಕ ಪರಿಚಯ, ಮಾರಾಟ ಮಾಡುತ್ತೇವೆ’ ಎಂದರು.
‘25 ಕಡೆಗಳಲ್ಲಿ ಸ್ವಿಗ್ಗಿ, ಝೊಮ್ಯಾಟೋ ಮಾದರಿಯಲ್ಲಿ ನಮ್ಮ ಪ್ರತಿನಿಧಿಗಳು ಪುಸ್ತಕಗಳನ್ನು ಮನೆ ಬಾಗಿಲಿಗೆ ತಲುಪಿಸಲಿದ್ದಾರೆ’ ಎಂದರು.
ಈ ಪರಿಕಲ್ಪನೆಯ ಬ್ರ್ಯಾಂಡ್ ರಾಯ ಭಾರಿ ನಟ ರಮೇಶ್ ಅರವಿಂದ್ ಮಾತನಾಡಿ, ‘ಬಾಲ್ಯದಲ್ಲಿ ನಟನೆಗಾಗಿ ತಲೆಬೋಳಿಸಿದ್ದರು. ಸ್ನೇಹಿತರ ಕಾಟ ತಪ್ಪಿಸಿಕೊಳ್ಳಲು ಗ್ರಂಥಾಲಯದಲ್ಲಿ ಅಡಗಿರುತ್ತಿದ್ದೆ. ಆಗ ಜಗತ್ತಿನ ಎಲ್ಲ ಕೃತಿಗಳಿಗೆ ತೆರೆದುಕೊಂಡೆ. ಹೀಗಾಗಿ ಈಗ ಬರಹಗಾರರ ನಡುವೆ ಇದ್ದೇನೆ’ ಎಂದರು. ನಟ ಕಿಚ್ಚ ಸುದೀಪ್ ಶುಭ ಹಾರೈಸಿದರು. ಕಾರ್ಯಕ್ರಮಕ್ಕೂ ಮುನ್ನ ರವೀಂದ್ರ ಸೊರಗಾವಿ, ಸುಪ್ರಿಯಾ ಆಚಾರ್ಯ, ಸವಿತಾ ಗಣೇಶ್ ತಂಡದಿಂದ ಗಾಯನ ನಡೆಯಿತು.
ಬಿಡುಗಡೆಯಾದ ಕೃತಿಗಳು
ಕೈಹಿಡಿದು ನೀ ನಡೆಸು ತಂದೆ(ವಿಶ್ವೇಶ್ವರ ಭಟ್), ಅವರು ಇವರು ದೇವರು(ಜೋಗಿ), ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್(ಗಣೇಶ್ ಕಾಸರಗೋಡು), ವಿಶ್ವ ಸುಂದರಿ(ಕುಂ. ವೀರಭದ್ರಪ್ಪ), ಸೋಲೆಂಬ ಗೆಲುವು(ದೀಪಾ ಹಿರೇಗುತ್ತಿ), ಮನಿ ಮನಿ ಎಕಾನಮಿ(ರಂಗಸ್ವಾಮಿ ಮೂಕನಹಳ್ಳಿ), ಆರ್ಟ್ ಆಫ್ ಸಕ್ಸಸ್( ರಮೇಶ್ ಅರವಿಂದ್), ನಿಮಗೆಷ್ಟು ಹಣ ಬೇಕು?(ಅನಂತ ಹುದೆಂಗಜೆ), ಒಳ್ಳೆಯ ಬದುಕಿನ ಸೂತ್ರಗಳು(ರವಿಕೃಷ್ಣಾ ರೆಡ್ಡಿ) ಕೃತಿಗಳು ಬಿಡುಗಡೆಯಾದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.