ಬೆಂಗಳೂರು: ಮಿದುಳು ನಿಷ್ಕ್ರಿಯಗೊಂಡ 29 ವರ್ಷದ ಮಹಿಳೆಯೊಬ್ಬರು ಅಂಗಾಂಗ ದಾನದ ಮೂಲಕ ಎಂಟು ಮಂದಿಗೆ ನೆರವಾಗಿದ್ದಾರೆ.
ಕೋಲಾರದ ನಿವಾಸಿ ಶ್ವೇತಾ ಅವರು ಆ.27ಕ್ಕೆ ಪಾರ್ಶ್ವವಾಯು (ಸ್ಟ್ರೋಕ್) ಪೀಡಿತರಾಗಿ, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಪತಿಹರೀಶ್ ಅವರು ಇಲ್ಲಿನಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದಿದ್ದರಿಂದ ವೈದ್ಯರು ಆ.31 ರಂದು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿ, ಅಂಗಾಂಗ ದಾನದ ಬಗ್ಗೆ ಕುಟುಂಬದವರಿಗೆ ತಿಳಿಸಿದರು.
ಶ್ವೇತಾ ಅವರ ಯಕೃತ್ತು, ಮೂತ್ರಪಿಂಡಗಳು, ಹೃದಯ ಕವಾಟ, ಚರ್ಮ ಮತ್ತು ಕಾರ್ನಿಯಾಗಳನ್ನು ದಾನವಾಗಿ ಪಡೆದ ವೈದ್ಯರು, ಕವಾಟ ವನ್ನುಜಯದೇವ ಹೃದ್ರೋಗ ಸಂಸ್ಥೆಗೆ, ಚರ್ಮವನ್ನು ವಿಕ್ಟೋರಿಯಾ ಚರ್ಮ ನಿಧಿಗೆ, ಕಾರ್ನಿಯಾಗಳನ್ನು ಪ್ರಭಾ ನೇತ್ರ ಚಿಕಿತ್ಸಾಲಯಕ್ಕೆ ನೀಡಿದರು.
ಒಂದು ಮೂತ್ರಪಿಂಡವನ್ನು ಎನ್ಯು ಆಸ್ಪತ್ರೆಯಲ್ಲಿ, ಯಕೃತ್ತು ಮತ್ತು ಮತ್ತೊಂದು ಮೂತ್ರಪಿಂಡವನ್ನು ಬಿಜಿಎಸ್ ಗ್ಲೆನೆಗಲ್ಸ್ ಆಸ್ಪತ್ರೆಯಲ್ಲಿ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗಳಿಗೆ ಕಸಿ ಮಾಡಲಾಗಿದೆ.