ಬೆಂಗಳೂರು: 'ಕೊರೊನಾ ಸಂದರ್ಭದಲ್ಲಿ ಸೋಂಕು ಸಂಬಂಧ ಜನರಿಗೆ ಮಾಹಿತಿ ತಲುಪಿಸುವ ಮೂಲಕ ಮುದ್ರಣ, ದೃಶ್ಯ ಹಾಗೂ ಸಾಮಾಜಿಕ ಮಾಧ್ಯಮಗಳು ಮಾನವ ಹಕ್ಕುಗಳನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸಿವೆ' ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕ, ಗುಪ್ತ ಕಾಲೇಜು ಹಾಗೂ ಬಿಟಿಎಲ್ ಕಾಲೇಜುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 'ಕೋವಿಡ್-19 ಸಂದರ್ಭದಲ್ಲಿ ಮಾನವ ಹಕ್ಕುಗಳ ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರ' ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಎನ್ಎಸ್ಎಸ್ ಸಂಯೋಜನಾಧಿಕಾರಿ ಎನ್.ಸತೀಶ್ ಗೌಡ, 'ಮಾಧ್ಯಮವಿಲ್ಲದ ಸಮಾಜವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಸಾರ್ವಜನಿಕರಿಗೆ ಮಾಹಿತಿ ಪಸರಿಸುವ ಮೂಲಕ ಮಾಧ್ಯಮಗಳು ಮಾನವ ಹಕ್ಕುಗಳ ರಕ್ಷಕನಾಗಿ ಕೆಲಸ ಮಾಡುತ್ತಿವೆ' ಎಂದು ತಿಳಿಸಿದರು.
’ಪ್ರಜಾವಾಣಿ‘ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಹಿರಿಯ ವಕೀಲ ಸಿ.ಎನ್.ಮಂಜಪ್ಪ, ಕಾನೂನು ಪ್ರಾಧ್ಯಾಪಕಿ ಎಸ್.ಎಸ್.ಜಾಹ್ನವಿ, ವಿವಿಯ ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಂಯೋಜಕಿ ವಾಹಿನಿ, ಗುಪ್ತ ಕಾಲೇಜಿನ ಪ್ರಾಂಶುಪಾಲ ಜಿ.ಆರ್.ಸುಧಾಕರ್ ಹಾಗೂ ಬಿಟಿಎಲ್ ಕಾಲೇಜಿನ ಪ್ರಾಂಶುಪಾಲ ಡಾ.ಶಿವರಾಮ್ ಇದ್ದರು.