ಬೆಂಗಳೂರು: 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು ಮಾಡುವ ಯೋಜನೆ ಅಡಿಯಲ್ಲಿ ಕೆ.ಆರ್.ಪುರ ಬಳಿಯ ಹೊರಮಾವು ಹಾಗೂ ಕಲ್ಕೆರೆ ಗ್ರಾಮಗಳಲ್ಲಿ ಕೊಳವೆಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಪೈಪ್ ಅಳವಡಿಸಿದ ನಂತರ ಅಗೆಯಲಾಗಿದ್ದ ಮಣ್ಣನ್ನು ಭರ್ತಿ ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಜಲಮಂಡಳಿ ತಿಳಿಸಿದೆ.
ಒಂದು ವರ್ಷದಿಂದಹೊರಮಾವು ಹಾಗೂ ಕಲ್ಕೆರೆ ಗ್ರಾಮಗಳಲ್ಲಿ ನಡೆಯುತ್ತಿದ್ದ ಜಲಮಂಡಳಿ ಕಾಮಗಾರಿಯಿಂದವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಈಬಗ್ಗೆ ‘ಪ್ರಜಾವಾಣಿ’ಯಲ್ಲಿ (ಜೂ.6, 2018) ‘ರಸ್ತೆ ಅಗೆದು ಹಾಗೇ ಬಿಟ್ಟರು’ ಶೀರ್ಷಿಕೆ ಅಡಿ ಸುದ್ದಿ ಪ್ರಕಟವಾಗಿತ್ತು.
ವೆಟ್ಮಿಕ್ಸ್ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಪಾಲಿಕೆ ವತಿಯಿಂದಲೇ ಕೈಗೆತ್ತಿಕೊಳ್ಳಬೇಕಾಗಿದೆ. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದೆ. ರಸ್ತೆ ಕಾಮಗಾರಿಗೆ ಪಾಲಿಕೆಗೆ ಒಟ್ಟು ₹82 ಕೋಟಿ ಪಾವತಿ ಮಾಡಲಾಗಿದೆ. ಹೀಗಾಗಿ ಈ ಗ್ರಾಮಗಳ ರಸ್ತೆ ಪುನರ್ ನಿರ್ಮಾಣ ಕೆಲಸ ಪಾಲಿಕೆಗೆ ಸೇರಿದ್ದು ಎಂದು ಮಂಡಳಿ ತಿಳಿಸಿದೆ.