ಬೆಂಗಳೂರು: ಹೊಸ ವರ್ಷಕ್ಕೆ ಜಲಮಂಡಳಿಯು ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ನಗರದ ನೀರು ಸರಬರಾಜಿನ ಇತಿಹಾಸ, ಜಲ ಸಂರಕ್ಷಣೆಯ ಮಹತ್ವ ಮತ್ತು ನಿರ್ವಹಣೆಯ ವಿಧಾನಗಳ ಮಾಹಿತಿಯನ್ನು ಇದರಲ್ಲಿ ನೀಡಿದೆ.
1896ರಲ್ಲಿ ಹೆಸರಘಟ್ಟದಿಂದ ನಗರಕ್ಕೆ ನೀರು ಸರಬರಾಜಾಗುತ್ತಿದ್ದುದರಿಂದ ಹಿಡಿದು, 1933ರಲ್ಲಿ ತಿಪ್ಪಗೊಂಡನಹಳ್ಳಿ, ನಂತರ ಕಾವೇರಿ ಒಂದರಿಂದ ನಾಲ್ಕನೇ ಹಂತದವರೆಗೆ ಸಾಗಿಬಂದ ಕಾಮಗಾರಿಯ ವಿವರ ಮತ್ತು ಈಗ ಪ್ರಗತಿಯಲ್ಲಿರುವ ಕಾವೇರಿ ಐದನೇ ಹಂತದ ಯೋಜನೆಗಳ ಮಾಹಿತಿ ಇದರಲ್ಲಿದೆ.
ಜೀವಸಂಕುಲದಲ್ಲಿ ನೀರಿನ ಸಂರಕ್ಷಣೆ, ಮಳೆ ನೀರು ಸಂಗ್ರಹಿಸುವ ಮತ್ತು ಅಂತರ್ಜಲ ಮರುಪೂರಣದ ಮಹತ್ವ, ತ್ಯಾಜ್ಯ ನೀರು ನಿರ್ವಹಣೆಯಲ್ಲಿ ಬಳಸುತ್ತಿರುವ ತಂತ್ರಜ್ಞಾನದ ಮಾಹಿತಿಯೂ ಈ ಕ್ಯಾಲೆಂಡರ್ನಲ್ಲಿದ್ದು, ಇದಕ್ಕೆ ಪೂರಕವಾಗಿ ಅತ್ಯಾಕರ್ಷಕವಾದ ಫೋಟೊಗಳನ್ನು ಹಾಕಲಾಗಿದೆ.